ವಿಜಯಪುರ: ‘ನವೋದಯದ ಪ್ರಭಾವದಿಂದಾಗಿ ಬಿ.ಎಂ.ಶ್ರೀ, ದ.ರಾ.ಬೇಂದ್ರೆ, ಕುವೆಂಪು ಅವರು ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಪಂಪ, ರನ್ನ, ಪೊನ್ನ, ಜನ್ನರ ಕೊಡುಗೆಯೂ ಅಪಾರವಾಗಿದೆ’ ಎಂದು ವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರು ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ದತ್ತಿ ಉಪನ್ಯಾಸ’ ಹಾಗೂ ದೇವರ ಗೆಣ್ಣೂರಿನ ಗಣಪತಿ ಚಲವಾದಿ ರಚಿಸಿರುವ ‘ಮಾತೃಭೂಮಿ’ ಕವನ ಸಂಕಲನದ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆಂಗ್ಲ ಭಾಷೆ ಕಲಿತರೂ, ಕನ್ನಡದ ಪ್ರೀತಿಯನ್ನು ಕಡಿಮೆಮಾಡಿಕೊಳ್ಳಬಾರದು. ಭಾಷೆ ನಿಂತ ನೀರಾಗದೇ ಚಲನೆಯಲ್ಲಿರಬೇಕು. ಒಂದು ವೇಳೆ ಅದು ನಿಂತ ನೀರಾದರೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಕುಸುಮಾಕರ, ಶಂ.ಗು. ಬಿರಾದಾರ, ಮಧುರ ಚನ್ನರ ನುಡಿಗಳು ಜಿಲ್ಲೆಯ ಸಾಹಿತ್ಯಾಸಕ್ತಿಗೆ ಹೊಸ ದಾರಿಯನ್ನು ತೋರಿವೆ’ ಎಂದರು.
ಕೃತಿ ಪರಿಚಯಿಸಿದ ಉಪನ್ಯಾಸಕಿ ಮೀನಾಕ್ಷಿ ಪಾಟೀಲ, ‘ವೃತ್ತಿಗಿಂತ ಪ್ರವೃತ್ತಿಯತ್ತ ಮಿಡಿಯುವುದೇ ರಚನಾತ್ಮಕ ಕ್ರಿಯೆಯಾಗಿದೆ’ ಎಂದರು.
‘ಜನಪದ ಸಾಹಿತ್ಯದಲ್ಲಿ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದ ಡಾ. ಸೋಮಶೇಖರ ವಾಲಿ, ‘ಜಾನಪದ ಕನ್ನಡ ಸಾಹಿತ್ಯದ ಜೀವಾಳವಾಗಿದೆ. ಕನ್ನಡದ ಪ್ರಪ್ರಥಮ ತ್ರಿಪದಿ ಕಪ್ಪೆ ಅರೆಭಟ್ಟನ ಬಾದಾಮಿಯ ಶಾಸನ ಹಾಗೂ ಹಲಸಂಗಿ ಗೆಳೆಯರ ಸಾಹಿತ್ಯದ ಪ್ರೀತಿ ಬಲು ದೊಡ್ಡದು. ಹಂತಿ ಪದಗಳು, ಡೊಳ್ಳಿನ ಪದಗಳು, ಜೋಗುಳ ಪದಗಳು, ಬೀಸುವ ಕಲ್ಲಿನ ಪದಗಳು, ಸೋಬಾನೆ ಪದಗಳು, ಸಂಪ್ರದಾಯದ ಪದಗಳು ಜನಪದರ ಜೀವನಾಡಿಯಾಗಿವೆ’ ಎಂದು ಹೇಳಿದರು.
ವಸುಂಧರಾ ಐನಾಪುರ ಮಾತನಾಡಿ, ‘ನೈತಿಕತೆ ಇಲ್ಲದ ಬದುಕು ಮೌಲ್ಯವಿಲ್ಲದ ಕೃತಿಗಳು ಎರಡೂ ಅರ್ಥಹೀನ. ಒಂದು ಕೃತಿ, ಒಬ್ಬ ಕೃತಿಕಾರನ ಕಲ್ಪನೆ ಓದುಗರ ಕಣ್ಣು ತೆರೆಸುವಂತಿರಬೇಕು’ ಎಂದು ಅಭಿಪ್ರಾಯಪಟ್ಟರು.