ವಿಜಯಪುರ: ಸಿಡಿ ಪ್ರಕರಣ ಎಸ್ಐಟಿಗೆ ನೀಡಿದ್ದು ಸಮಂಜಸವಲ್ಲ. ಇದನ್ನು ಸಿಬಿಐಗೆ ನೀಡಬೇಕಿತ್ತು. ಸಿಡಿ ಪ್ರಕರಣ ಎಸ್ಐಟಿ ಮೇಲೆ ಪ್ರಭಾವ ಬೀರಬಹುದು, ಆದರೆ, ಸಿಬಿಐ ಮೇಲೆ ಪ್ರಭಾವ ಬೀರಲು ಆಗಲ್ಲ. ಹೀಗಾಗಿ ಸಿಡಿ ಕೇಸ್ಗಳ ಸಮಗ್ರ ತನಿಖೆಯನ್ನು ಸಿಬಿಐಗೆ ನೀಡಬೇಕುಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಲವರು ಸಚಿವರಾಗಲು ಸಿನಿಮಾ ತಾರೆಯರನ್ನು ದೆಹಲಿಗೆ ಕರೆದೊಯ್ದಿದ್ದರು. ಅಂತವರೆಲ್ಲ ಈಗ ಸಚಿವರಾಗಿದ್ದಾರೆ ಎಂದು ಆರೋಪಿಸಿದರು.
ಸಿಡಿ ಮಾಡಿ ಬ್ಲ್ಯಾಕ್ ಮೇಲ್ ಮಾಡೋದೇ ಕಾಂಗ್ರೆಸ್ ಸಂಸ್ಕೃತಿಯಾಗಿದ್ದು, ಈಗಲೂ ಅದು ಮುಂದುವರೆದಿದೆ ಎಂದು ಆರೋಪಿಸಿದರು.
ಗಿಮಿಕ್ ಆಗದಿರಲಿ:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರ ಹಾಗೂ ವಿವಿಧ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿರುವುದು ಕೇವಲ ರಾಜಕೀಯ ಗಿಮಿಕ್ ಆಗಬಾರದು ಎಂದು ಹೇಳಿದರು.
ಸದ್ಯ ಸರ್ಕಾರ ನೇಮಕ ಮಾಡುವ ಸಮಿತಿಗೆ ಕಾಲಮಿತಿ ನಿಗದಿ ಮಾಡಬೇಕು. ಟಿಎ, ಡಿಎ ಪಡೆಯಲು ಮಾತ್ರ ಸಮಿತಿ ಸೀಮಿತವಾಗಬಾರದು ಎಂದು ಹೇಳಿದರು.