ವಿಜಯಪುರ: ಬೀದಿ ಬದಿ ವ್ಯಾಪಾರಿಗಳ ಪಿಎಂ ಸ್ವನಿಧಿ ಯೋಜನೆ, ಪಿಎಂಇಜಿಪಿ ಮತ್ತು ಡೇ ನಲ್ಮ್ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಬ್ಯಾಂಕಿನಲ್ಲಿ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದುಸಂಸದರಮೇಶ ಜಿಗಜಿಣಗಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳ ಮುಖ್ಯಸ್ಥರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಮೀಕ್ಷಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೆಚ್ಚಿನ ರೈತರು ದೀರ್ಘಾವಧಿ ಕೃಷಿ ಸಾಲ ಪಡೆದು ತಮ್ಮ ಕೃಷಿ ಭೂಮಿ ಅಭಿವೃದ್ಧಿಪಡಿಸಿ ಕೃಷಿ ಉತ್ಪನ್ನ ಹೆಚ್ಚು ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಜುಲೈನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಅಡಿಯಲ್ಲಿ ಸ್ವಾನಿಧಿ ಉತ್ಸವ ಹಮ್ಮಿಕೊಳ್ಳುತ್ತಿದ್ದು, ಎಲ್ಲ ಬ್ಯಾಂಕಿನ ಅಧಿಕಾರಿಗಳು ಕೈಜೋಡಿಸಿ ಈ ಕಾರ್ಯಕ್ರಮ ಚೆನ್ನಾಗಿ ಮೂಡಿಬರಲು ಸಹಾಯ ಮಾಡಬೇಕು ಎಂದರು.
ವಿವಿಧ ಬ್ಯಾಂಕಿನಲ್ಲಿ ಬಾಕಿ ಇರುವ ಬೆಳೆ ವಿಮೆ ಅರ್ಜಿಗಳು, ಸಾಲ ಮನ್ನಾ ಯೋಜನೆಯ ಅರ್ಹ ಫಲಾನುಭವಿಗಳ ಅರ್ಜಿಗಳು, ತಹಶೀಲ್ದಾರ್ ಮಟ್ಟದಲ್ಲಿ ಹಾಗೂ ಬ್ಯಾಂಕುಗಳ ಮಟ್ಟದಲ್ಲಿ ಬಾಕಿ ಇರುವ ಅರ್ಜಿಗಳನ್ನು ಕೂಡಲೆ ವಿಲೇವಾರಿ ಮಾಡಲು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳು ಒಮ್ಮತದಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಲು ತಿಳಿಸಿದರು.
ಡಿವೈಎಸ್ಪಿ ಜಯಪ್ರಕಾಶ ನ್ಯಾಮಗೌಡ, ಆರ್ಬಿಐ ಜಿಲ್ಲಾ ಅಧಿಕಾರಿ ಶ್ರೀಶಾಂತ ಪ್ರಕಾಶ, ಲೀಡ್ ಬ್ಯಾಂಕಿನ ವ್ಯವಸ್ಥಾಪಕ ನರೇಂದ್ರ ಬಾಬು, ನಬಾರ್ಡ್ ಬ್ಯಾಂಕಿನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಕಾಸ ರಾಠೋಡ ಇತರರು ಉಪಸ್ಥಿತರಿದ್ದರು.