ಬಸವನಬಾಗೇವಾಡಿ: ‘ಯುವಕರು ಈ ದೇಶದ ಆಸ್ತಿ. ಪ್ರತಿಯೊಬ್ಬರೂ ತಮ್ಮ ಜವಾಬ್ಧಾರಿ ಅರಿತು ಉನ್ನತ ಗುರಿಯನ್ನಿಟ್ಟುಕೊಂಡು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು’ ಎಂದು ಸಿವಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಹೇಳಿದರು.
ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳಬೇಕು. ನಮ್ಮ ಗುರಿ ಉನ್ನತವಾಗಿರಬೇಕು. ಸಾಧನೆಗೆ ಸಮಯ ತೆಗೆದುಕೊಳ್ಳತ್ತದೆ. ಆದರೆ ಛಲ ಬಿಡಬಾರದು. ಮಹಾನ್ ಪುರುಷರ ಜೀವನ, ಆದರ್ಶಗಳನ್ನು ತಿಳಿದುಕೊಳ್ಳಬೇಕು’ ಎಂದರು.
ವಕೀಲ ಎಸ್.ಎಸ್.ಹೆಗಡ್ಯಾಳ ಮಾತನಾಡಿ, ಸ್ವಾಮಿ ವಿವೇಕಾನಂದರಿಗೆ ಯುವಕರ ಮೇಲೆ ಹೆಚ್ಚಿನ ಭರವಸೆ ಇತ್ತು. ಯುವಕರು ಇಚ್ಛಾಶಕ್ತಿ, ವಿವೇಚನಾ ಶಕ್ತಿ ಬೆಳಸಿಕೊಳ್ಳಬೇಕು. ಕೆಟ್ಟ ವ್ಯಸನಗಳಿಂದ ದೂರವಿರಬೇಕು. ಉದಾತ್ತ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಉನ್ನತ ಆದರ್ಶಗಳೊಂದಿಗೆ ದೇಶ ಕಟ್ಟಲು ಮುಂದಾಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಹುಲ್ ಸಾಹ, ರಾಜರಾಜೇಶ್ವರಿ ಅಶೋಕ ಸುತಾರ, ಸರ್ಕಾರಿ ಪಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ನೀಲಪ್ಪ ಹೊಸಮನಿ, ವಕೀಲರಾದ ಬಿ.ಆರ್.ಅಡ್ಡೊಡಗಿ, ವಿ.ಬಿ.ಮರ್ತುರ ಇದ್ದರು.