ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ 28ರಲ್ಲಿ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಇಜಾಜ್ ಅಹ್ಮದ್ ಎಂ.ಮುಕಬಿಲ್ ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ತಲೆ ಮೇಲೆ ಕಲ್ಲು ಹೊತ್ತು ಕೊಂಡು ಮಹಾನಗರ ಪಾಲಿಕೆಯಿಂದ ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸುವ ಮೂಲಕ ಗಮನ ಸೆಳೆದರು.
ಇಜಾಜ್ ಅಹ್ಮದ್ ಎಂ.ಮುಕಬಿಲ್ ಮಾತನಾಡಿ,ವಾರ್ಡ್ 28ರ ಸಮಸ್ಯೆ ಬಗೆಹರಿಸಲು ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಸ್ಪಂದಿಸಿಲ್ಲ.ಪಾಲಿಕೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂದು ಆರೋಪಿಸಿದರು.
ಒಂದು ವರ್ಷದ ಹಿಂದೆ ಹೊಸದಾಗಿ ಒಳಚರಂಡಿ ಹಾಕಲಾಯಿತು. ಆದರೆ, ಸಿ.ಸಿ.ರಸ್ತೆ ಮಾಡಿಲ್ಲ. ಮಳೆ ಬಂದರೆ ರಸ್ತೆ ಮೇಲೆ ನೀರು ನಿಂತು ರಾಡಿಯಾಗಿ ಜನರಿಗೆ ಓಡಾಟಕ್ಕೆ ಕಷ್ಟವಾಗುತ್ತಿದೆ. ಆದಷ್ಟು ಬೇಗ ಸಿಸಿ ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಸಾಜಿದ್ ಹುಸೇನ ರಿಸಾಲ್ದಾರ್, ವಿಜಯಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ನಿಂಗನಗೌಡ ಸೋಲಾಪುರ ಕಾರ್ಯಕರ್ತರು ಪಾಲ್ಗೊಂಡಿದ್ದರು.