ವಿಜಯಪುರ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹಾಯಿಸಿ ನಾಲ್ವರ ಹತ್ಯೆ ಮಾಡಿರುವ ಪ್ರಕರಣವನ್ನು ಖಂಡಿಸಿ ಎಸ್ಯುಸಿಐ ಕಮ್ಯುನಿಷ್ಟ್ ಪಕ್ಷ ಹಾಗೂ ಆರ್ಕೆಎಸ್ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಹೋರಾಟ ನಿರತ ರೈತರ ಕಗ್ಗೊಲೆ ಮಾಡಿದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ಅಮಾಯಕ ರೈತರ ಕೊಲೆಗೈದ ಗೂಂಡಾಗಳನ್ನು ಶಿಕ್ಷಿಸಿ, ಬಂಡವಾಳಶಾಹಿಗಳ ಸೇವೆ ಮಾಡುವ ಸರ್ಕಾರಕ್ಕೆ ಧಿಕ್ಕಾರ, ದೇಶದ ಹೋರಾಟ ನಿರತ ರೈತರಿಗೆ ಜಯವಾಗಲಿ, ಅಂಬಾನಿ–ಅದಾನಿಗಳ ಬೂಟು ನೆಕ್ಕುವ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಮೊಳಗಿಸಿದರು.
ಎಸ್ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ್ರೆಡ್ಡಿ ಮಾತನಾಡಿ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಹಾಗೂ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಅವರ ವಿರುದ್ಧ ಕಪ್ಪು ಭಾವುಟ ತೋರಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮೇಲೆ ಕಾರು ಚಲಾಯಿಸಿ ಕೊಲೆ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯ ಎಂದು ಖಂಡಿಸಿದರು.
ರೈತರ ಬೇಡಿಕೆಗಳನ್ನು ಪರಿಗಣಿಸಿ, ಆ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿರುವ ಕೇಂದ್ರ ಸರ್ಕಾರದ ಸಚಿವರು ಹಾಗೂ ಅವರ ಬೆಂಬಲಿಗ ಬಿಜೆಪಿ ಹಾಗೂ ಆರ್ಎಸ್ಎಸ್ ಗುಂಡಾಗಳು ಈ ರೀತಿ ವರ್ತಿಸುತ್ತಿರುವುದು ಪ್ರಜಾಪ್ರಭುತ್ವ ನಡೆಯಲ್ಲ. ಕೇವಲ ಬಂಡವಾಳಶಾಹಿ ಕಾರ್ಪೊರೇಟ್ ಮನೆತನಗಳಿಗೆ ಲಾಭ ಮಾಡುವ ಸರ್ಕಾರದ ನಡೆ ಜನ ವಿರೋಧಿಯಾಗಿದೆ ಎಂದರು.
ಆರ್.ಕೆ.ಎಸ್ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಹೋರಾಟ ನಿರತ ರೈತರನ್ನು ಕೊಲೆಗೈದ ಘಟನೆಯಿಂದ ಇಡೀ ದೇಶದ ರೈತ ಸಮುದಾಯ ಆಘಾತಕೊಳಗಾಗಿದ್ದಾರೆ ಎಂದು ಹೇಳಿದರು.
ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ಕೀಳಾಗಿ ಮಾತನಾಡುವ ಪಕ್ಷಗಳಿಗೆ ಹಾಗೂ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಜಾಪ್ರಭುತ್ವದ ಜೀವಾಳ ಹೋರಾಟ, ಪ್ರತಿಭಟನೆಯಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುನ್ನಡೆಸಬೇಕೆಂದರೆ ಸಂವಿದಾನಾತ್ಮಕ ಹುದ್ದೆಯಲ್ಲಿರುವವರು ಪ್ರಜಾತಾಂತ್ರಿಕ ಹೋರಾಟಗಳಿಗೆ ರಕ್ಷಣೆ ಕೊಡಬೇಕಾಗಿರುವುದು ಆದ್ಯ ಕರ್ತವ್ಯವಾಗುತ್ತದೆ. ಆದರೆ, ಬಿಜೆಪಿ ಸರ್ಕಾರ ತನ್ನ ಕೋಮುವಾದಿ ಧೋರಣೆಯಿಂದ ಪ್ರತಿಭಟನೆ ಹತ್ತಿಕ್ಕುವುದು, ಪ್ರತಿಭಟನಾಕಾರರ ಕೊಲೆ ಮಾಡುವುದು, ಕೊಲೆಗಡುಕರಿಗೆ ರಕ್ಷಣೆ ನೀಡುವುದು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲೆಗೈದ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲು ಮೃತ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಈ ಘಟನೆಗೆ ಕಾರಣರಾಗಿರುವ ಸಂವಿಧಾನಾತ್ಮಕ ಹುದ್ದೆಯಲ್ಲಿ ಮುಂದುವರೆಯಬಾರದು ಎಂದು ಆಗ್ರಹಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರು ಆಗಮಿಸಿ ಮನವಿ ಸ್ವೀಕರಿಸಿದರು. ಮುಖಂಡರಾದ ಮಲ್ಲಿಕಾರ್ಜುನ ಎಚ್.ಟಿ ಮತ್ತು ಸಿದ್ದಲಿಂಗ ಬಾಗೇವಾಡಿ, ಭರತಕುಮಾರ, ಸುರೇಖಾ ಕಡಪಟ್ಟಿ, ಶಿವಬಾಳಮ್ಮ ಕೊಂಡಗೂಳಿ, ಮಹಾದೇವ ಲಿಗಾಡೆ, ನಜೀರ್ ಪಟೇಲ, ಅಂಬಿಕಾ ವಳಸಂಗ, ರಮೇಶ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
***
ರೈತ ಹೋರಾಟವನ್ನು ಹತ್ತಿಕ್ಕಲು, ಮಸಿ ಬಳಿಯಲು ಆರಂಭದಿಂದಲೂ ಬಿಜೆಪಿ ಸರ್ಕಾರ ಕುತಂತ್ರಿ ಬುದ್ದಿ ತೋರಿಸುತ್ತಿದೆ. ಹೊರಾಟಗಾರರ ಮೇಲೆ ದಾಳಿ ನಡೆಸಿ, ಕೊಲೆಗೈದು ಪ್ರಜಾತಂತ್ರವನ್ನೇ ಕಗ್ಗೊಲೆ ಮಾಡುತ್ತಿರುವುದು ಖಂಡನೀಯ
–ಬಾಳು ಜೇವೂರ, ಜಿಲ್ಲಾ ಸಂಚಾಲಕ, ಆರ್.ಕೆ.ಎಸ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.