ವಿಜಯಪುರ: ನಗರ ಸೇರಿದಂತೆ ದೇವರ ಹಿಪ್ಪರಗಿ, ಸಿಂದಗಿ, ಬಸವನ ಬಾಗೇವಾಡಿ, ತಿಕೋಟಾ ಭಾಗದಲ್ಲಿ ಸೋಮವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಜೊತೆಗೆ ಆಗಾಗ ಧಾರಾಕಾರ ಮಳೆ ಸುರಿಯಿತು.
ದೇವರಹಿಪ್ಪರಗಿ ಪಟ್ಟಣದಲ್ಲಿ ಸಂತೆ ದಿನವಾದ ಸೋಮವಾರ ಮಧ್ಯಾಹ್ನದಿಂದಲೇ ಆರಂಭಗೊಂಡ ಮಳೆಯಿಂದ ಗ್ರಾಮೀಣ ಪ್ರದೇಶದ ತರಕಾರಿ ಹಾಗೂ ಕಾಳು ಮಾರಾಟಗಾರರು ತೊಂದರೆ ಅನುಭವಿಸುವಂತಾಯಿತು.
ಎರಡು ಗಂಟೆಗಳ ಕಾಲ ಆಗಾಗ ಸುರಿದ ಮಳೆ ತರಕಾರಿ ಬೆಲೆ ಇಳಿಮುಖವಾಗಲು ಕಾರಣವಾಯಿತು. ಇದರಿಂದ ಮಾರಾಟಗಾರರು ನಷ್ಟ ಅನುಭವಿಸಿದರು. ಬೆಳಿಗ್ಗೆ ಕೆ.ಜಿ.ಯೊಂದಕ್ಕೆ ₹10 ರಿಂದ ₹ 20 ಬೆಲೆಯಿದ್ದ ಟೊಮೆಟೊ, ಬಟಾಟೆ, ಸೊಪ್ಪು ಮಳೆ ಆರಂಭವಾಗುತ್ತಿದ್ದಂತೆಯೇ ಅರ್ಧ ಬೆಲೆಗೆ ಮಾರಾಟವಾದವು.
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣೇಶ ದರ್ಶನಕ್ಕೂಮಳೆಯಿಂದ ಭಕ್ತರಿಗೆ ಅಡಚಣೆಯಾಯಿತು.