ವಿಜಯಪುರ: ರೋಗಿಗಳಿಗೆ ಹುಳು ಮಿಶ್ರಿತ ಔಷಧಿಯಿಂದ(ಸಲಾಯಿನ್) ಚಿಕಿತ್ಸೆ ನೀಡಿದ್ದ ಪ್ರಕರಣದ ಸಂಬಂಧ ಇಬ್ಬರು ವಜಾ, ಇಬ್ಬರು ಅಮಾನತುಗೊಂಡಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹೊರ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಹಡಲಸಂಗ ಗ್ರಾಮದ ನಿವಾಸಿ ನಿರ್ಮಲಾ ವಾಲಿಕಾರ ಅವರ ಕೈಗೆ ಆದ ಗಾಯಕ್ಕೆ ಔಷಧಿ ಹಾಕುವಾವ, ಹುಳುಗಳು ತುಂಬಿದ್ದ ಸಲಾಯಿನ್ ಬಾಟಲಿಯಿಂದಲೇ ಚಿಕಿತ್ಸೆ ನೀಡಿದ ಆಸ್ಪತ್ರೆ ಸಿಬ್ಬಂದಿಯ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಗಾಯಾಳುವಿನ ಸಂಬಂಧಿಕರು ವಿಡಿಯೋ ಮಾಡಿ, ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದರು.
ಪ್ರಕರಣದ ಸಂಬಂಧ ಹೊರ್ತಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೋರಿ ಹಾಗೂ ನರ್ಸ್ ನಂದಾ ಕಲಾಲ್ ಸೇವೆಯಿಂದ ವಜಾಗೊಂಡಿದ್ದಾರೆ. ಇನ್ನಿಬ್ಬರು ಸಿಬ್ಬಂದಿಗಳಾದ ಪುಂಡಲಿಕ ಲಗಳಿ ಹಾಗೂ ಸುರೇಶ ಜಾಧವರನ್ನ ಅಮಾನತು ಮಾಡಲಾಗಿದೆ.
ವಿಜಯಪುರ ಡಿ.ಎಚ್.ಓ (ಜಿಲ್ಲಾ ಆರೋಗ್ಯಾಧಿಕಾರಿ) ಡಾ.ರಾಜಕುಮಾರ ಯರಗಲ್ ಈ ಆದೇಶ ನೀಡಿದ್ದಾರೆ. ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಬೇಜವಾಬ್ದಾರಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.