ವಿಜಯಪುರ: ತಾಳಿಕೋಟೆ ತಾಲ್ಲೂಕಿನ ಕಾವೇರಿ ಡಾಬಾ ಬಳಿ ಶುಕ್ರವಾರ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟಿಪ್ಪರನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸುಮಾರು 7 ಬ್ರಾಸ್ನಷ್ಟು ಮರಳು ತುಂಬಿದ್ದ ಅಂದಾಜು ₹ 25 ಸಾವಿರ ಮೌಲ್ಯದ ಮರಳನ್ನು ಹಾಗೂ ಟಿಪ್ಪರ್ ಅನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಇವಣಗಿ ತೋಟದ ಮನೆ ನಿವಾಸಿ ಟಿಪ್ಪರ್ ಚಾಲಕ ಸೋಮು ಕಲಬುರ್ಗಿ (23) ಟಿಪ್ಪರಿನಲ್ಲಿ ಮರಳನ್ನು ಕಳ್ಳತನದಿಂದ ಲೋಡ್ ಮಾಡಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೊರಟಿದ್ದಾಗಿ ಒಪ್ಪಿಕೊಂಡಿದ್ದಾನೆ.
ಖಚಿತ ಮಾಹಿತಿಯನ್ನಾಧರಿಸಿ ತಾಳಿಕೋಟಿ ಕಂದಾಯ ನಿರೀಕ್ಷಕ, ತಾಳಿಕೋಟಿ ತಹಶೀಲ್ದಾರ್ ಹಾಗೂ ವಿಜಯಪುರ ಉಪವಿಭಾಗಾಧಿಕಾರಿ ಅವರನ್ನು ಒಳಗೊಂಡ ತಂಡವು ದಾಳಿ ನಡೆಸಿತ್ತು.ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.