ವಿಜಯಪುರ: ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು, ವ್ಯಕ್ತಿ ಎಷ್ಟೇ ದೊಡ್ಡವನಾದರೂ ಶಿಕ್ಷಕರ ಮುಂದೆ ತಲೆಬಾಗಲೇಬೇಕು ಎಂದುನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್.ಚೌಕಿಮಠ ಹೇಳಿದರು.
ಇಟ್ಟಂಗಿಹಾಳದ ಎಕ್ಸಲಂಟ್ ಕ್ಯಾಂಪಸ್ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದಶಿಕ್ಷಕರಿಗೆ ಸನ್ಮಾನ ಹಾಗೂ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಇಂದಿನ ವಿದ್ಯಾರ್ಥಿಗಳನ್ನು ತಯಾರಿಸಲು ಶಿಕ್ಷಕರು ಉಪನ್ಯಾಸ ವಿಧಾನದಿಂದ ಪ್ರಾಯೋಗಿಕ ವಿಧಾನಕ್ಕೆ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ, ಶಿಕ್ಷಕರ ಸಾಮರ್ಥ್ಯ ಅಗಾಧವಾದದ್ದು: ಅವರು ದೇಶವನ್ನು ಕಟ್ಟುವ ರೂವಾರಿಗಳು ಎಂದರು.
ಬಾಲಗಾಂವ -ಕಾತ್ರಾಳ ಆಶ್ರಮದ ಡಾ.ಅಮೃತಾನಂದ ಯತಿ, ಕೇವಲ ಅರ್ಥ ಸಂಗ್ರಹದ ಹಿಂದೆ ಬೆನ್ನು ಹತ್ತದೆ, ಆತ್ಮ ಸಂತೃಪ್ತಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕರಾದ ರಾಜಶೇಖರ ಕೌಲಗಿ, ಪಂಚಾಕ್ಷರಯ್ಯ ಹಿರೇಮಠ ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಮೀನಾಕ್ಷಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ದಯಾನಂದ ಕೆಲೂರ, ಮಂಜುನಾಥ ಕೌಲಗಿ, ಸ್ನೇಹಲತಾ ಹಿರೇಮನಿ, ವಿ.ಆರ್. ಹಿರೇಮಠ, ಬಿ.ಎಸ್. ಹತ್ತಿ, ಎಸ್.ಬಿ. ಅಲ್ಲವಗೋಳ ಇದ್ದರು.