ವಿಜಯಪುರ: ಅಂಗವಿಕಲರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು. ಸ್ವಯಂ ಉದ್ಯೋಗ ಮಾಡುವ ಮೂಲಕ ಇತರೆಯವರಂತೆ ಜೀವನ ನಡೆಸಬೇಕು. ಎಂದಿಗೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಹೇಳಿದರು.
ನಗರದ ಶಾಸಕರ ಕಾರ್ಯಾಲಯದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 18 ಅಂಗವಿಕಲರಿಗೆ ಉಚಿತ ಸ್ಕೂಟರ್ಗಳನ್ನು ವಿತರಿಸಿ ಅವರು ಮಾತನಾಡಿದರು.
2018–19ನೇ ಸಾಲಿಗೆ ಸಂಬಂಧಿಸಿದಂತೆ ತಲಾ ₹68 ಸಾವಿರ ಮೊತ್ತದ ಸ್ಕೂಟರ್ ಅನ್ನು ಅಂಗವಿಕಲರಿಗೆ ವಿತರಿಸಲಾಗಿದೆ. 2019–20ನೇ ಸಾಲಿನ ಅನುದಾನದಲ್ಲಿ ಮತ್ತೆ 21 ಜನ ಅರ್ಹ ಅಂಗವಿಕಲರಿಗೆ ಸ್ಕೂಟರ್ ಶೀಘ್ರದಲ್ಲೇ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್ ಲಾಕ್ಡೌನ್ನಿಂದ ಸಮಸ್ಯೆಗೆ ಒಳಗಾದ ಕ್ಷೇತ್ರದ ಎಲ್ಲ ಅಂಗವಿಕಲರಿಗೆ ಶೀಘ್ರದಲ್ಲೇ ಆಹಾರ ಕಿಟ್ ವಿತರಿಸಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯರಾದ ದ್ಯಾಮಗೊಂಡ ಕಾಂಬಳೆ, ದೂಳೇಶ ಚವ್ಹಾಣ, ಉಪ ವಿಭಾಗಾಧಿಕಾರಿ ಸೋಮನಾಥ ಗೆಣ್ಣೂರ, ತಹಶೀಲ್ದಾರ್ ಮೋಹನ ಕುಮಾರಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ವಿಠಲ ರಾವ್ ಉಪಾಧ್ಯಾಯ ಇದ್ದರು.