ವಿಜಯಪುರ: ಯುಗಾದಿ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಯಲ್ಲಿ ಶುಕ್ರವಾರ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.
ನಗರದ ಲಾಲ್ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಮಾವಿನ ತಳಿರು, ಬೇವಿನ ಹೂವು, ಪುಟಾಣಿ ಮಿಶ್ರಿತ ಎಳ್ಳುಬೆಲ್ಲ, ಹೂವು, ಹಣ್ಣುಗಳನ್ನು ಜನರು ಖರೀದಿಸಿದರು.
ಬಟ್ಟೆ ಅಂಗಡಿಗಳು, ಹೂವಿನ ಮಾರುಕಟ್ಟೆ, ಸಿಹಿ ತಿನಿಸುಗಳ ಮಾರಾಟ ಅಂಗಡಿ ಮತ್ತು ತರಕಾರಿ ಅಂಗಡಿಗಳಲ್ಲಿ ಜನದಟ್ಟಣೆ ಕಂಡುಬಂದಿತು. ಗ್ರಾಮೀಣ ಭಾಗದ ಜನರು ಹಬ್ಬದ ಪದಾರ್ಥಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣಿನ ಬೆಲೆ ಗಗನಮುಖಿಯಾಗಿತ್ತು. ತರಕಾರಿ ಬೆಲೆ ಸಾಮಾನ್ಯವಾಗಿತ್ತು.
ವಿಶೇಷ ಪೂಜೆ: ಯುಗಾದಿ ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲಾಗಿದೆ.
ಹೊಸ ವರ್ಷ ಆಚರಣೆಗೆ ಮನವಿ:
ಹಿಂದೂ ಬಾಂಧವರು ಭಾರತೀಯ ಸಂಸ್ಕೃತಿಗನುಸಾರ ಚೈತ್ರ ಶುಕ್ಲ ಪ್ರತಿಪದ ಅಂದರೆ ಯುಗಾದಿಯಂದು ಹೊಸ ವರ್ಷವನ್ನು ಆಚರಿಸುವಂತೆ ಹಿಂದೂ ಜನಜಾಗೃತಿ ಸಮಿತಿಯು ಮನವಿ ಮಾಡಿದೆ.
ಚೈತ್ರ ಶುಕ್ಲ ಪ್ರತಿಪದೆಯಂದು ಸೃಷ್ಟಿಯ ನಿರ್ಮಿತಿ ಆಗಿದೆ. ಆದ್ದರಿಂದ ಇದು ಹಿಂದೂ ಧರ್ಮದವರಿಗಷ್ಟೇ ಅಲ್ಲ, ಅಖಿಲ ಸೃಷ್ಟಿಯ ಆರಂಭದ ದಿನವಾಗಿದೆ ಎಂಬುದನ್ನು ಭಾರತೀಯರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆತಿಳಿಸಿದ್ದಾರೆ.
ಭಾರತೀಯ ಸಂಸ್ಕೃತಿಗನುಸಾರ ಯುಗಾದಿಯಂದು ಹೊಸ ವರ್ಷಾರಂಭವೆಂದು ಆಚರಿಸುವುದು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಈ ಎಲ್ಲಾ ದೃಷ್ಟಿಯಿಂದ ಶ್ರೇಯಸ್ಕರ ಮತ್ತು ಲಾಭದಾಯಕವಾಗಿದೆ ಎಂದು ಹೇಳಿದ್ದಾರೆ.