ವಿಜಯಪುರ: ಸಾರಿಗೆ ನೌಕರರ ಮುಷ್ಕರಿಂದ ಮೂರು ದಿನಗಳಿಂದ ಬಂದ್ ಆಗಿದ್ದ ಬಸ್ಸುಗಳ ಸಂಚಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರದಿಂದ ಪುನರಾರಂಭವಾಗಿದೆ.
ಬೆಳಿಗ್ಗೆಯಿಂದ ಬೆರಳೆಣಿಕೆಯಷ್ಟು ಬಸ್ ಗಳು ಮಾತ್ರ ರಸ್ತೆಗಳಿದಿವೆ. ಬಸ್ ಸಂಚಾರ ಆರಂಭವಾಗುತ್ತಿರುವಂತೆ ಪ್ರಯಾಣಿಕರು ಖುಷಿಯಾಗಿದ್ದು, ವಿವಿಧ ನಗರ, ಪಟ್ಟಣಗಳಿಗೆ ತೆರಳಲು ನಿಲ್ದಾಣಗಳತ್ತ ಆಗಮಿಸುತ್ತಿದ್ದಾರೆ.
'ಬೆಳಿಗ್ಗೆಯಿಂದ ವಿವಿಧ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ 64 ಬಸ್ ಗಳು ಸಂಚಾರ ಆರಂಭಿಸಿವೆ. ಮಧ್ಯಾಹ್ನದ ವೇಳೆಗೆ 100 ಬಸ್ ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ವಿಜಯಪುರ ಜಿಲ್ಲಾ ಸಂಚಾರ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ 'ಪ್ರಜಾವಾಣಿ'ಗೆ ತಿಳಿಸಿದರು.
ಚಾಲಕ, ನಿರ್ವಾಹಕರು ಸೇರಿದಂತೆ ಎಲ್ಲ ಸಾರಿಗೆ ನೌಕರರು ಕೆಲಸಕ್ಕೆ ಬರುತ್ತಿದ್ದು, ಸಂಜೆ ವೇಳೆಗೆ ಬಹುತೇಕ ಎಲ್ಲ ಮಾರ್ಗಗಳಿಗೂ ಎಂದಿನಂತೆ ಬಸ್ ಸಂಚಾರ ಆರಂಭವಾಗಲಿದೆ ಎಂದರು.