ದೇವರಹಿಪ್ಪರಗಿ: ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಉತ್ತಮ ಮಳೆಯಿಲ್ಲದ ಕಾರಣ ತಕ್ಷಣವೇ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ತಾಲ್ಲೂಕು ರೈತಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ತಾಲ್ಲೂಕು ಸೇರಿದಂತೆ ಮತಕ್ಷೇತ್ರದಲ್ಲಿ ವಾಡಿಕೆಯಂತೆ ಮುಂಗಾರಿನ ಬಹುತೇಕ ಮಳೆಗಳು ಕೈಕೊಟ್ಟಿವೆ. ಇದೇ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಪೂರೈಸುವ ಆಲಮಟ್ಟಿ ಆಣೆಕಟ್ಟಿನಲ್ಲಿ ನೀರು ಕಡಿಮೆಯಾಗಿ ನೀರು ಬರದಂತಾಗಿತ್ತು. ಈಗ ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಆಲಮಟ್ಟಿ ಆಣೆಕಟ್ಟಿನಲ್ಲಿ 40 ಟಿಎಂಸಿ ಅಡಿಗಿಂತಲೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಈ ನೀರನ್ನು ಕಾಲುವೆಗಳಿಗೆ ಹರಿಸಲು ಯಾವುದೇ ತೊಂದರೆಯಿಲ್ಲ. ಅದಕ್ಕಾಗಿ ತಕ್ಷಣವೇ ಕಾಲುವೆಗಳ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ದೇವರಹಿಪ್ಪರಗಿ ಭಾಗದ ಚಿಮ್ಮಲಗಿ ಮುಖ್ಯ ಕಾಲುವೆ ಹಾಗೂ ನಾಗಠಾಣ ಉಪಕಾಲುವೆಗಳಿಗೆ ಕೂಡಲೇ ನೀರು ಹರಿಸಲು ಕೆಬಿಜೆಎನ್ಎಲ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರೈತಸಂಘದ ಪದಾಧಿಕಾರಿಗಳಾದ ಅಜೀಜ್ ಯಲಗಾರ, ಸೋಮಶೇಖರ ಹಿರೇಮಠ, ಬಸವರಾಜ ಕಲ್ಲೂರ(ಮುಳಸಾವಳಗಿ), ಶಂಕರಗೌಡ ಕೋಟಿಖಾನಿ(ಹರನಾಳ), ಗುರು ಕರಭಂಟನಾಳ (ಪಡಗಾನೂರ) ಶಿವಾನಂದ ಯಾಳಗಿ, ಗುರುರಾಜ್ ಜಡಗೊಂಡ, ನಾಗೇಂದ್ರ ಇಂಡಿ, ಸಿದ್ದಣ್ಣ ಮಡ್ನಳ್ಳಿ, ಮಂಜುನಾಥ ಒಂಟೆತ್ತೀನ, ಸೇರಿದಂತೆ ವಿವಿಧ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.