ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಜಟ್ಟಗಿ ಗ್ರಾಮದಲ್ಲಿ ಸೋಮವಾರ ನಿರ್ಮಾಣ ಹಂತದ ಕೆಪಿಟಿಸಿಎಲ್ ವಿದ್ಯುತ್ ಕೇಂದ್ರದ ಆವರಣ ಗೋಡೆ ಕುಸಿದು, ಕಾರ್ಮಿಕ ಬಸವಲಿಂಗಯ್ಯ ಕೊಟ್ರಯ್ಯ ಹಿರೇಮಠ (38) ಎಂಬುವರು ಮೃತಪಟ್ಟಿದ್ದಾರೆ.
‘ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಕನ್ನಿಹಳ್ಳಿಯ ಬಸವಲಿಂಗಯ್ಯ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ದೊಡ್ಡ ಗಾತ್ರದ ಕಲ್ಲುಗಳು ಉರುಳಿವೆ. ಬೆಂಗಳೂರಿನ ಕುಮಾರ ಎಲೆಕ್ಟ್ರಿಕಲ್ ಕಂಪನಿಯು ಕಾಮಗಾರಿಯ ಉಸ್ತುವಾರಿ ವಹಿಸಿದೆ. ಘಟನೆಗೆ ಕಳಪೆ ಕಾಮಗಾರಿ ಅಥವಾ ಬೇರೆ ಕಾರಣ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.