ತಾಂಬಾ: ಗ್ರಾಮದ ಪ್ರತಿಯೊಂದು ಮನೆಯಲ್ಲಿ ಮಹಿಳೆಯರು ಒಂದು ತಿಂಗಳವರೆಗೆ ಒಂದೇ ಹೊತ್ತು ಊಟ ಮಾಡುತ್ತಾರೆ. ಈ ವೈಶಿಷ್ಟ್ಯ ಇಲ್ಲಿನ ಶ್ರೀ ಗವಿಸಿದ್ದೇಶ್ವರನಿಗಾಗಿ ಕೈಗೊಳ್ಳುವ ಉಪವಾಸ ವ್ರತ.
ಗ್ರಾಮದ ಗವಿಸಿದ್ದೇಶ್ವರ ಹೆಸರಿನಲ್ಲಿ ಹಿಂದು ಮತ್ತು ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಸರ್ವರ ಕಲ್ಯಾಣಕ್ಕಾಗಿ ಮಹಾನವಮಿ ಅಮವಾಸ್ಯೆಯಿಂದ ದೀಪಾವಳಿಯ ನರಕ ಚತುರ್ದಶಿಯವರೆಗೆ ಒಂದು ತಿಂಗಳ ಪರ್ಯಂತ ಎಲ್ಲರೂ ಉಪವಾಸ ಮಾಡುತ್ತಾರೆ.
ದೀಪಾವಳಿಯ ಪ್ರತಿಪದೆ ಶ್ರೀ ಗವಿಸಿದ್ದೇಶ್ವರ ಮುಕ್ತಿ ಮಂದಿರದಲ್ಲಿ ಗ್ರಾಮದ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಕೂಡಿ ಕೊಂಡು ವಿಶೇಷ ಪೂಜೆ ಉಪವಾಸ ವ್ರತವನ್ನು ಮುಕ್ತಾಯಗೊಳಿಸುತ್ತಾರೆ.
ಈ ಕಾರ್ಯಕ್ರಮದ ಅಂಗವಾಗಿ ಮುಕ್ತಿ ಮಂದಿರದಲ್ಲಿ ಭಕ್ತಾದಿಗಳಿಗೆ ಸಜ್ಜೆಯ ಕಡಬು, ಬಾಳೆಹಣ್ಣು ಅಂಬಲಿ, ಸಜ್ಜುಕ, ಜಿಲೇಬಿ, ಬುಂದೆ ಮತ್ತು ಫೇಡೆ ಮಹಾಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ. ಉಪವಾಸ ವ್ರತ ಈ ವರ್ಷವೂ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಸಮಾರಂಭಕ್ಕೆ ಆಗಮಿಸಿದ ಸಿಂದಗಿ ಶಾಸಕ ರಮೇಶ ಭೂಸನೂರ, ದೇವಸ್ಥಾನದಲ್ಲಿ ಮಂಗಲ ಕಾರ್ಯಾಲಯಕ್ಕೆ ಶಾಸಕರ ನಿಧಿಯಿಂದ ರೂ 5 ಲಕ್ಷ ಕೊಡುವುದಾಗಿ ವಾಗ್ದಾನ ಮಾಡಿದರು.
ತಾ.ಪಂ.ಸದಸ್ಯೆ ಗುರಲಿಂಗವ್ವ ಗಂಗನಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಮತಾಜ ಇಂಡಿ, ಎಸ್.ಎಸ್.ಕಲ್ಲೂರ, ಎಸ್. ಎಸ್. ಕನ್ನಾಳ, ಜೆ.ಆರ್.ಪೂಜಾರಿ, ಎಸ್. ಎನ್. ಮೂಲಿಮನಿ, ಎಸ್. ಎಸ್. ಹಿರೆಕುರಬರ, ಪರಸಪ್ಪ ಕನ್ನಾಳ, ಪೂಜಪ್ಪ ಸಿಂದಗಿ, ಚಂದ್ರಾಮ ಮೂಲಿಮನಿ, ಜಕ್ಕಪ್ಪ ಹತ್ತಳ್ಳಿ, ಮಾಳಪ ಪೂಜಾರಿ ಉಪಸ್ಥಿತರಿದ್ದರು.