ಮುದ್ದೇಬಿಹಾಳ: ತೊಗರಿ ಖರೀದಿಸು ವಲ್ಲಿ ಉಂಟಾಗಿರುವ ವಿಳಂಬ ನೀತಿ, ಗೊಂದಲ ನಿವಾರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ಅಂಬೇಡ್ಕರ್ ವೃತ್ತದಲ್ಲಿ ಸರಣಿ ಸತ್ಯಾಗ್ರಹ ಪ್ರಾರಂಭಿಸಿದರು.
ಖರೀದಿ ಸಾಮರ್ಥ್ಯ ಹೆಚ್ಚಿಸಬೇಕು, ಹೊಸದಾಗಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬಿಜೆಪಿ ಮಂಡಲ ಅಧ್ಯಕ್ಷ ಎಂ.ಡಿ. ಕುಂಬಾರ ಮಾತನಾಡಿ, ಮಧ್ಯವರ್ತಿ ಗಳು, ಅಡತ ವ್ಯಾಪಾರಸ್ಥರು ಒಳದಾರಿಯಲ್ಲಿ ಬೇರೆ ತಾಲ್ಲೂಕು, ಜಿಲ್ಲೆ, ರೈತರ ತೊಗರಿ ಖರೀದಿಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಈ ತಾಲ್ಲೂಕಿನ ರೈತರ ತೊಗರಿ ಖರೀದಿ ಆಗದೆ ನಮ್ಮವರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮೊಬೈಲ್ ಮೂಲಕ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ರೈತರ ಸಮಸ್ಯೆ ಗಮನಕ್ಕೆ ತಂದು ಕೂಡಲೇ ಖರೀದಿ ಸಾಮರ್ಥ್ಯ ಹೆಚ್ಚಿಸಲು, ಹೆಚ್ಚುವರಿ ಕೇಂದ್ರ ತೆರೆಯುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಎಂಎಎಸ್ ಬಾಗವಾನ ಸ್ಥಳಕ್ಕೆ ಭೇಟಿ ನೀಡಿ ಶನಿವಾರ ದಿಂದಲೇ ಖರೀದಿ ಪ್ರಾರಂಭಿಸಲಾ ಗುತ್ತದೆ. ತಕ್ಕಡಿ ಹೆಚ್ಚಿಗೆ ಇಟ್ಟು ಖರೀದಿ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ ಎಂದರು.
ಢವಳಗಿ ಭಾಗದ ತೊಗರಿ ಖರೀದಿಗೆ ಸಮಸ್ಯೆ ಇದ್ದು ಗ್ರೇಡಮನ್ ನೇಮಿಸಿ ಖರೀದಿಸಿ ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗುತ್ತದೆ. ಸದ್ಯ ಸತ್ಯಾಗ್ರಹ ಕೈಬಿಡಿ ಎಂದು ಕೋರಿದರು.
ತಹಶೀಲ್ದಾರ್ ಕೋರಿಕೆ ತಿರಸ್ಕರಿಸಿದ ಧರಣಿನಿರತರು ಬೇಡಿಕೆ ಈಡೇರಿದ ನಂತರವೇ ಸತ್ಯಾಗ್ರಹ ಕೈಬಿಡುವುದಾಗಿ ತಿಳಿಸಿ ಧರಣಿ ಮುಂದುವರೆಸಿದರು.
ಪ್ರಮುಖರಾದ ಪ್ರಮುಖ ರಾದ ಎಂ.ಎಸ್.ಪಾಟೀಲ, ಮಂಗಳಾ ದೇವಿ ಬಿರಾದಾರ, ಆರ್.ಎಸ್.ಪಾಟೀಲ ಕೂಚಬಾಳ, ಶಿವಶಂಕರಗೌಡ ಹಿರೇ ಗೌಡರ, ಮಲಕೇಂದ್ರಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ, ಡಾ.ಸಿ.ಎಚ್. ನಾಗರಬೆಟ್ಟ, ಬಸವರಾಜ ಗುಳಬಾಳ, ದೇವಿಂದ್ರ ವಾಲಿಕಾರ, ಬಿ.ಜಿ. ಜಗ್ಗಲ್, ಸಂಗಯ್ಯ ಹಾಲಗಂಗಾಧರ ಮಠ ಹಾಗೂ ಇತರರು ಇದ್ದರು.