ಸಿಂದಗಿ: ತಾಲ್ಲೂಕಿನ ಹೋಬಳಿ ಪ್ರದೇಶ ಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಜೊತೆಗೆ ಮೇವು ಬ್ಯಾಂಕ್ ತೆರೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪಟ್ಟಣದ ಮಿನಿವಿಧಾನಸೌಧ ಆವರಣ ದಲ್ಲಿ ಪ್ರಾರಂಭಿಸಿದ ಧರಣಿ ಸತ್ಯಾಗ್ರಹ ಸೋಮವಾರ 4ನೇ ದಿನಕ್ಕೆ ಕಾಲಿಟ್ಟಿತು.
ಸೋಮವಾರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಹಶೀಲ್ದಾರ್ ಎಂ.ಎಸ್.ಅರಕೇರಿ ಭೇಟಿ ನೀಡಿ ಧರಣಿ ಸತ್ಯಾಗ್ರಹ ನಿಲ್ಲಿಸುವಂತೆ ರೈತರಿಗೆ ಮನವಿ ಮಾಡಿಕೊಂಡರು. ಆದರೆ ಸಂಧಾನ ವಿಫಲವಾಯಿತು.
ರೈತ ಸಂಘ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಸನಗೌಡ ಧರ್ಮ ಗೊಂಡ ಮಾತನಾಡಿ, ತೊಗರಿ ಖರೀದಿ ಕೇಂದ್ರಗಳನ್ನು ಮತ್ತು ಮೇವು ಬ್ಯಾಂಕನ್ನು ಹೋಬಳಿ ಮಟ್ಟದಲ್ಲಿ ಸ್ಥಾಪಿಸುವ ಹಾಗೂ ಪಂಪಸೆಟ್ ಗಳಿಗೆ ದಿನಂಪ್ರತಿ 8 ತಾಸು ವಿದ್ಯುತ್ ಪೂರೈಕೆ ಮಾಡಬೇಕು, ಸತತ ಮೂರು ವರ್ಷ ದಿಂದ ಬರಗಾಲ ಬಿದ್ದುದರಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂಬ ಬೇಡಿಕೆಗಳ ಬಗ್ಗೆ ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದರು.
ತಮ್ಮ ಬೇಡಿಕೆಗಳು ಈಡೇರುವ ತನಕ ಧರಣಿ ಸತ್ಯಾಗ್ರಹ ನಿಲ್ಲಿಸುವದಿಲ್ಲ ಎಂದು ಧರ್ಮಗೊಂಡ ಸ್ಪಷ್ಟ ಉತ್ತರ ಕೊಟ್ಟರು. ಆಗ ತಹಶೀಲ್ದಾರ್ ಧರಣಿ ಸ್ಥಳದಿಂದ ತೆರಳಿದರು.
ಸತ್ಯಾಗ್ರಹದಲ್ಲಿ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶಿವಲಿಂಗಪ್ಪ ಗೌಡ ಬಿರಾದಾರ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಬೋರಾವತಿ, ನಿಂಗನಗೌಡ ಬಿರಾದಾರ, ಶಿವೂ ಕೋಳಾರಿ, ಮುತ್ತು ಪಾಟೀಲ, ವಿಠ್ಠಲ ಕರ್ಜಗಿ, ಉಮೇಶ ಮಯೂರಮಠ, ವಸಂತ ಕುಲಕರ್ಣಿ, ರಾಜಶೇಖರ ಮಣೂರ, ರಾಜೂ ಕಲಾಲ, ಮಲ್ಲಪ್ಪ ಬಮ್ಮನಹಳ್ಳಿ ಮುಂತಾದವರು ಭಾಗವಹಿಸಿದ್ದರು.