ನಿಡಗುಂದಿ: ವಿದ್ಯುತ್ ಕೊರತೆಯಿಂದ ರೈತರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಬಾರದು ಇತ್ತೀಚಿಗೆ ಮಳೆ, ಗಾಳಿಯಿಂದಾಗಿರುವ ಅವಘಡವನ್ನು ಪರಿಶೀಲಿಸಿ ತುರ್ತು ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕ ಶಿವಾನಂದ ಪಾಟೀಲ ಹೆಸ್ಕಾಂ ಅಧಿಕಾರಿ ವರ್ಗಕ್ಕೆ ಎಚ್ಚರಿಸಿದರು.
ಗೊಳಸಂಗಿ ಗ್ರಾಮದ ಲಂಬಾಣಿ ತಾಂಡಾ ಬಳಿ ಹಳ್ಳದಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ಗೊಳಸಂಗಿ-ಕೂಡಗಿ ರಸ್ತೆಗೆ ಸುಮಾರು ₹ 65 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಾಂದಾರ ಮತ್ತು ಮಸೂತಿ ರಸ್ತೆಗೆ ₹ 70 ಲಕ್ಷ ವೆಚ್ಚದ ಸೇತುವೆ ಸಹಿತ ಬಾಂದಾರ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶುದ್ದ ಕುಡಿಯುವ ನೀರಿನ ಘಟಕದ ಚಾಲನೆಗೆ ವಿದ್ಯುತ್ ಪೂರೈಕೆಯ ಕೊರತೆ ಎದ್ದು ಕಾಣುತ್ತಿದೆ. ಲಂಬಾಣಿ ತಾಂಡಾ, ಮುಜಾವರ ಮಡ್ಡಿಗಳಲ್ಲಿ ವಿದ್ಯುತ್ ಪರಿವರ್ತಕ ಇಲ್ಲದ್ದರಿಂದ ಕತ್ತಲೆಯ ಬದುಕು ಅನಿವಾರ್ಯವಾಗಿದೆ.
ಕೆಲ ರೈತರ ಹೊಲಗಳಲ್ಲಿ ವಿದ್ಯುತ್ ಪರಿವರ್ತಕ ಸುಟ್ಟದ್ದರಿಂದ ರೈತಾಪಿ ಜನತೆಗೆ ತೀವ್ರ ತೊಂದರೆಯುಂಟಾಗಿದೆ. ಮಹಿಳೆಯರ ಸಾರ್ವಜನಿಕ ಶೌಚಾಲಯಕ್ಕೆ ವಿದ್ಯುತ್ ಸಂಪರ್ಕ ಅಳವಡಿಕೆ, ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಿ ಪರಿಹಾರ ಕ್ರಮಕ್ಕೆ ಶಾಸಕರು ಆದೇಶಿಸಿದರು.
ಬಸವನ ಬಾಗೇವಾಡಿ ತಹಸೀಲ್ದಾರ್ ಎಂ.ಎನ್.ಚೋರಗಸ್ತಿ, ಪಿಎಸ್ಐ ಶರಣಗೌಡ ಗೌಡರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮುರಗೇಶ ಹೆಬ್ಬಾಳ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ, ಗ್ರಾಪಂ ಅಧ್ಯಕ್ಷೆ ಗೀತಾ ಗುಡದಿನ್ನಿ, ತಾಪಂ ಮಾಜಿ ಅಧ್ಯಕ್ಷ ಬಂದೇನವಾಜ ಡೋಲಚಿ, ಮುಖಂಡರಾದ ಜಿ.ಎನ್.ಮದ್ದರಕಿ, ಕಾ.ಹು.ಬಿಜಾಪುರ, ನಾರಾಯಣ ಕಿರಗತ, ಜಿಪಂ ಲೋಕೋಪಯೋಗಿ ಇಲಾಖೆ, ತಾಪಂ-ಗ್ರಾಪಂ ಹೆಸ್ಕಾಂ ಅಧಿಕಾರಿ ಬಳಗ, ನೂರಾರು ರೈತರು ಇದ್ದರು.
ವಿದ್ಯುತ್ ಅವಘಡಕ್ಕೆ ದೂರು ಸಲ್ಲಿಸಿ ಮಳೆಗಾಲದಲ್ಲಿ ರೈತಾಪಿ ವರ್ಗದ ಜಮೀನುಗಳಲ್ಲಾಗಲಿ, ಅಥವಾ ತೆಲಗಿ ಹೆಸ್ಕಾಂ ವ್ಯಾಪ್ತಿಯ ಯಾವುದೇ ಗ್ರಾಮದ ಲ್ಲಾಗಲಿ ವಿದ್ಯುತ್ ಕಂಬ ಬೀಳುವದು, ತಂತಿ ಹರಿಯುವದು ಮತ್ತಿತರ ಅವಘಡಗಳು ಸಂಭವಿಸಿದಾಗ ಕೂಡಲೇ ಲಿಖಿತ ಇಲ್ಲವೇ 9480882646ಕ್ಕೆ ಕರೆ ಮಾಡಿ ಎಂದು ತೆಲಗಿ ಹೆಸ್ಕಾಂ ಶಾಖಾಧಿಕಾರಿ ರಮೇಶ ಲಮಾಣಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.