ಶಹಾಪುರ: ಸಾಧನೆಗಳ ಪರಿಪೂರ್ಣತೆಗೆ ಇಚ್ಛಾಶಕ್ತಿ ಹಾಗೂ ನಿರಂತರ ಪರಿಶ್ರಮ ಅಗತ್ಯವಾಗಿದೆ. ಸತತ ಪ್ರಯತ್ನದ ದಾರಿ ಹಿಡಿದರೆ ಯಶಸ್ಸು ನಿಶ್ಚಿತವಾಗಿ ದೊರಕುತ್ತದೆ ಎಂದು ದಂಡಗುಂಡ ಸಂಸ್ಥಾನಮಠದ ಸಂಗನಬಸವ ಶಿವಾಚಾರ್ಯರು ತಿಳಿಸಿದರು.
ನಗರದ ಹೊರವಲಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ್ ಫೌಂಡೇಶನ್ ಆಶ್ರಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ಅನಾಥಾಶ್ರಮದಲ್ಲಿ ಭಾನುವಾರ 2ನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ತಂದೆ-ತಾಯಿ, ಬಂಧು-ಬಳಗ ಪ್ರೀತಿಯಿಂದ ವಂಚಿತರಾದ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿರುವ ರೇಣುಕಾ ಹುಗ್ಗಿ ಅವರ ಕುಟುಂಬದ ಸದಸ್ಯರ ಕಾರ್ಯ ಮೆಚ್ಚುವಂತದ್ದು. ಅವರ ಕಾರ್ಯಕ್ಕೆ ಯಶಸ್ಸು ಸಿಗಲಿ, ಮುಂಬರುವ ದಿನಗಳಲ್ಲಿ ಇಲ್ಲಿನ 16 ಮಕ್ಕಳು ಉತ್ತಮ ಶಿಕ್ಷಣ ಸೌಲಭ್ಯ ಪಡೆದು ಪ್ರತಿಭಾವಂತರಾಗಲೆಂದು ತಿಳಿಸಿದರು.
ಗುರುಕಾಮ, ಚನ್ನಪ್ಪಗೌಡ ಶಿರವಾಳ, ಸುಧೀರ ಚಿಂಚೋಳಿ, ಡಾ.ಮೌನೇಶ ಕೆಂಭಾವಿ, ಮರೆಪ್ಪ.ಎಂ.ಪ್ಯಾಟಿ ,ಪ್ರಶಾಂತ ದೊಡ್ಡಮನಿ, ತಿಪ್ಪಣ್ಣ ಕ್ಯಾತನಾಳ, ಡಾ.ಜಗದೀಶ ಉಪ್ಪಿನ, ರವಿ ಮೋಟಗಿ ಇದ್ದರು.