ಯರಗೋಳ: 'ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಮೂಲಕ ಮಹಾತ್ಮಾ ಗಾಂಧಿಜೀಯವರ ಆಶಯವನ್ನು ಈಡೇರಿಸುವ 'ಅಮೃತ ಗ್ರಾಮ ಪಂಚಾಯಿತಿ' ಯೋಜನೆಗೆ ಯರಗೋಳ ಗ್ರಾಮ ಪಂಚಾಯಿತಿ ಆಯ್ಕೆಯಾಗಿದೆ.
75ನೇ ಸ್ವಾತಂತ್ರ್ಯತ್ಸೋವದ ನೆನಪಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಸ್ಟ್ 15 ರಂದು ಅಮೃತ ಗ್ರಾಮ ಪಂಚಾಯಿತಿ ಯೋಜನೆ ಘೋಷಿಸಿದ್ದರು. 'ಸೆಪ್ಟೆಂಬರ್ 23ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ 'ಅಮೃತ ಗ್ರಾಮ ಪಂಚಾಯಿತಿ ಯೋಜನೆ' ಗೆ ಚಾಲನೆ ನೀಡಿದರು. ಈ ಸಮಾರಂಭದಲ್ಲಿ ಯರಗೋಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಲ್ಯಾಣ ರಾವ ಭಾಗವಹಿಸಿದ್ದರು.
ರಾಜ್ಯದ 750 ಗ್ರಾಮ ಪಂಚಾಯಿತಿಗಳನ್ನು ಮುಂದಿನ ಬಜೆಟ್ ಒಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಯಾದಗಿರಿ ಜಿಲ್ಲೆಯಿಂದ 14 ಗ್ರಾಮ ಪಂಚಾಯಿತಿಗಳು ಈ ಯೋಜನೆಗೆ ಆಯ್ಕೆಯಾಗಿವೆ. ಪ್ರತಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿಯಾಗಿ ₹25ಲಕ್ಷ ಮಂಜೂರು ಮಾಡಲಾಗುತ್ತದೆ. ಎಂದು ಪಂಚಾಯತ್ ರಾಜ್ಇಲಾಖೆಯ ಹಿರಿಯ ಅಧಿಕಾರಿಗಳು 'ಪ್ರಜಾವಾಣಿ' ಗೆ ತಿಳಿಸಿದರು.
ಈ ಯೋಜನೆಗೆ ಆಯ್ಕೆಯಾದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ನಳ, ಶೇ 100ರಷ್ಟು ಘನ ತ್ಯಾಜ್ಯ ವಿಂಗಡಣೆ ಹಾಗು ವಿಲೆವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವುದು, ಪಂಚಾಯಿತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಅಮೃತ ಉದ್ಯಾನ ವನಗಳ ನಿರ್ಮಾಣ, ಗ್ರಂಥಾಲಯಗಳ ಡಿಜಿಟಲಿಕರಣ, ಶಾಲೆ, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯಗಳಿಗೆ ಸೌಲಭ್ಯ ಕಲ್ಪಿಸುವುದು, ಆಟದ ಮೈದಾನ, ಅವರಣ ಗೋಡೆಗಳ ನಿರ್ಮಾಣ, ರೈತರ ಕೃಷಿ ಉಪಯೋಗಕ್ಕೆ ಗೋದಾಮು ನಿರ್ಮಾಣ, ಕೆರೆ, ಕಲ್ಯಾಣಿಗಳ ಪುನಶ್ಚೇತನ ಮಾಡುವುದಾಗಿದೆ.
ಯರಗೋಳ ಗ್ರಾಮ ಪಂಚಾಯಿತಿಯು 22 ಚುನಾಯಿತ ಸದಸ್ಯರನ್ನು ಹೊಂದಿದೆ. 10 ಸಾವಿರ ಜನಸಂಖ್ಯೆ ಇದೆ. 202 ಹೆಕ್ಟೇರ್ ವಿಸ್ತೀರ್ಣ ವ್ಯಾಪ್ತಿಯ ಕೆರೆ, ಪದವಿ ಪೂರ್ವ ಕಾಲೇಜು, 7 ಅಂಗನವಾಡಿ ಕೇಂದ್ರಗಳು, 2 ಮೆಟ್ರಿಕ್ ಪೂರ್ವ ವಸತಿ ನಿಲಯಗಳು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಬ್ಯಾಂಕ್ ಮತ್ತುಉಕ್ಕಡ ಪೊಲೀಸ್ ಠಾಣೆ ಹೊಂದಿದೆ.
***
ಯರಗೋಳ ಗ್ರಾಮ ಪಂಚಾಯಿತಿಯು ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಆಯ್ಕೆಯಾಗಿದಕ್ಕೆ ಸಂತೋಷ ಆಗಿದೆ. ಅಭಿವೃದ್ಧಿ ಕಾರ್ಯಕ್ಕೆ ನಮ್ಮ ಸಹಾಯ ಇರುತ್ತದೆ.
- ರಾಮಣ್ಣ ಅಲ್ಲಿಪುರ,ಗ್ರಾಮ ಪಂಚಾಯಿತಿ ಸದಸ್ಯ ಯರಗೋಳ
***
ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿಗೆ ನೀಡಲಾಗುವ ಹೆಚ್ಚುವರಿ ₹ 25 ಲಕ್ಷ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಂಡರೆ, ಗ್ರಾಮವು ಮಾದರಿ ಅಭಿವೃದ್ಧಿ ಯಾಗುತ್ತದೆ.
-ನಿಂಗಣ್ಣ ಮಾನೆಗಾರ,ಯುವ ಉದ್ಯಮಿ ಯರಗೋಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.