ಸುರಪುರ: ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ಮುಖಂಡರು ಅಬಕಾರಿ ಇನ್ಸ್ಪೆಕ್ಟರ್ ಸೋಮಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗಪ್ಪ ಹಸನಾಪುರ ಮಾತನಾಡಿ, ‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕಿರಾಣಿ ಅಂಗಡಿ, ಹೋಟೆಲ್, ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಿರಂತರವಾಗಿ ನಡೆದಿದೆ. ಅಬಕಾರಿ ಅಧಿಕಾರಿಗಳು ಇದನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
ತಾಲ್ಲೂಕು ಸಮಿತಿ ಸಂಚಾಲಕ ವೀರಭದ್ರಪ್ಪ ತಳವಾರಗೇರಿ ಮಾತನಾಡಿ, ‘ಅಬಕಾರಿ ಇಲಾಖೆ ಶೀಘ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟವಾಗದಂತೆ ತೀವ್ರ ನಿಗಾ ವಹಿಸಬೇಕು. ನಿರ್ಲಕ್ಷ್ಯ ಧೋರಣೆ ತಾಳಿದಲ್ಲಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಅಂಬರೀಶ ದೊಡ್ಡಮನಿ, ಶೇಖರ ಬಡಿಗೇರ ಮಂಗಳೂರು, ಗೌತಮ ಬಡಿಗೇರ, ಆಕಾಶ ಕಟ್ಟಿಮನಿ, ವೆಂಕಟೇಶ ದೇವಪುರ, ಖಾಜಾ ಅಜ್ಮೀರ್, ಅಂಬೇಡ್ಕರ್ ದೊಡ್ಡಮನಿ, ಎಂ.ಪಟೇಲ, ರಮೇಶ ಬಡಿಗೇರ, ಅಶೋಕ ಕೋರಿ ಹಾಗೂ ರವಿಕುಮಾರ ದೊಡ್ಡಮನಿ ಇದ್ದರು.