ಹುಣಸಗಿ: ಕಾರು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆ ಆಯತಪ್ಪಿ ಕಾರು ಕಾಲುವೆಗೆ ಜಾರಿದ ಘಟನೆ ತಾಲ್ಲೂಕಿನ ಮಾಳನೂರ ಗ್ರಾಮದ ಬಳಿ ನಡೆದಿದ್ದು, ಅದರಲ್ಲಿ ಒಬ್ಬರು ಮೃತಪಟ್ಟಿದ್ದು ಇನ್ನಿಬ್ಬರು ಕಾಣೆಯಾಗಿದ್ದಾರೆ.
10 ಸಾವಿರ ಕ್ಯುಸೆಕ್ ನೀರು ಹyರಿಯುತ್ತಿದ್ದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಒಂದೇಕುಟುಂಬದ ಐವರು ಇದ್ದು, ಇಬ್ಬರು ಕಣ್ಮರೆಯಾಗಿದ್ದಾರೆ.ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬನ್ನೆಟ್ಟಿ ಗ್ರಾಮದ ಇಪ್ಕೋ ಕಂಪನಿಯ ನಿವೃತ್ತ ಅಧಿಕಾರಿ ಶರಣಗೌಡ ಎಸ್. ಬಿರಾದಾರ (62) ಹಾಗೂ ಅವರ ಪತ್ನಿ ಜಾನಕಿ (60) ಕಾಣೆಯಾಗಿದ್ದು, ಇವರ ಮಗ ಪವನ್ (35) ಅವರ ಶವ ಪತ್ತೆಯಾಗಿದೆ. ಪ್ರೇಮಾ (28), ಕೃತ್ತಿಕಾ (3) ಪ್ರಾಣಾಪಯದಿಂದ ಪಾರಾಗಿದ್ದಾರೆ.
ಹೊಲ ನೋಡಿಕೊಂಡು ವಾಪಸ್ ಬರುವ ವೇಳೆ ಘಟನೆ ನಡೆದಿದೆ. ಪ್ರೇಮಾ ಅವರು ಮಗುವಿನೊಂದಿಗೆ ಕಾಲುವೆಗೆ ಜಿಗಿದು ಈಜುತ್ತಿದ್ದ ಸಂದರ್ಭದಲ್ಲಿ ಕಾಲುವೆಯ ಬಳಿ ಇದ್ದ ವ್ಯಕ್ತಿಯೊಬ್ಬರು ಲುಂಗಿಯ ಸಹಾಯದಿಂದ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನುಳಿದ ಇಬ್ಬರಿಗಾಗಿ ಹುಡುಕಾಟ ನಡೆದಿದೆ ಎಂದು ಪಿಎಸ್ಐ ಬಾಪುಗೌಡ ಪಾಟೀಲ ತಿಳಿಸಿದ್ದಾರೆ.
ಡಿಎಸ್ಪಿ ವೆಂಕಟೇಶ ಉಗಿಬಂಡಿ, ಹುಣಸಗಿ ಸಿಪಿಐ ದೌಲತ್.ಎನ್.ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.