ಕೆಂಭಾವಿ: ಬ್ಯಾನರ್ ತೆರವುಗೊಳಿಸುವ ವಿಷಯದಲ್ಲಿ ಕೆಂಭಾವಿ ಠಾಣೆ ಪಿಎಸ್ಐ ಹಣಮಂತ ಬಂಕಲಗಿ ಮತ್ತು ದಲಿತ ಮುಖಂಡರ ಮಧ್ಯೆ ಪರಸ್ಪರ ವಾಗ್ವಾದ ನಡೆದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ. ಇದು ದಿನಕ್ಕೊಂದು ತಿರುವು ಪಡೆಯುತ್ತಿದೆ.
ವಿಡಿಯೊದಲ್ಲಿ ಏನಿದೆ: ಇಲ್ಲಿಗೆ ಸಮೀಪದ ಅಗತೀರ್ಥ ಗ್ರಾಮದಲ್ಲಿ ಘಟನೆ ನಡೆದಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಬ್ಯಾನರ್ ತೆರವುಗೊಳಿಸುವ ಕಾರ್ಯ ಗ್ರಾಪಂ ಹಾಗೂ ಪೊಲೀಸ್ ಸಿಬ್ಬಂದಿ ಎಲ್ಲೆಡೆ ಮಾಡುತ್ತಿದ್ದಾರೆ. ಅದರಂತೆ ಕಳೆದ ವಾರ ಅಗತೀರ್ಥ ಗ್ರಾಮದಲ್ಲಿ ಹಾಕಲಾಗಿದ್ದ ಮುಖಂಡರ ಭಾವಚಿತ್ರದ ಬ್ಯಾನರ್ನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಫೋಟೊ ಇರುವ ಬ್ಯಾನರ್ ತೆರವುಗೊಳಿಸಲು ಮುಂದಾದಾಗ ಗ್ರಾಮದ ಹಲವು ದಲಿತ ಮುಖಂಡರು (ಮಹಿಳೆಯರೂ ಸೇರಿ) ಮತ್ತು ಪಿಎಸ್ಐ ನಡುವೆ ಮಾತಿನ ಚಕಮಕಿ ನಡೆದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹರಿದಾಡುತ್ತಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಪೊಲೀಸ್ ಠಾಣೆಯ ಮುಂದೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಪಿಎಸ್ಐ ಅಮಾನತ್ತಿಗೆ ಆಗ್ರಹಿಸಿದೆ ಎನ್ನಲಾಗಿದ್ದು, ಈಗ ಈ ವಿಡಿಯೊ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪೊಲೀಸ್ ಹಿರಿಯ ಅಧಿಕಾರಿಗಳು ಯಾವ ರೀತಿ ಕ್ರಮ ಕೊಳ್ಳವರು ಎಂಬುದನ್ನು ಕಾದು ನೋಡಬೇಕಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ’ಚುನಾವಣಾ ಸಂದರ್ಭದಲ್ಲಿ ಬ್ಯಾನರ್ ತೆರವುಗೊಳಿಸಲಾಗುತ್ತಿದ್ದು, ಅದರಂತೆ ಎಲ್ಲ ಬ್ಯಾನರ್ ತೆರವುಗೊಳಿಸುವ ಸಂದರ್ಭದಲ್ಲಿ ಭೀಮ್ ಆರ್ಮಿ ಬ್ಯಾನರ್ ತೆರವುಗೊಳಿಸುವ ವೇಳೆ ವಾಗ್ವಾದ ನಡೆದಿದೆ‘ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.