ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕಾಳೆಬೆಳಗುಂದಿ ಗ್ರಾಮದ ಹೊರವಲಯದಲ್ಲಿ ಸುಂದರ ಉದ್ಯಾನವನ ನಿರ್ಮಾಣವಾಗಿದ್ದು, ಬೇಸಿಗೆಯಲ್ಲೂ ತಂಪಿನ ವಾತಾವರಣ ಮೂಡಿಸುತ್ತಿದೆ.
ಕಾಳೆಬೆಳಗುಂದಿ ಗ್ರಾಮವೂ ಐತಿಹಾಸಿಕ ಸ್ಥಾನಮಾನ ಹೊಂದಿರುವ ಗ್ರಾಮವಾಗಿದೆ. ಬನದೇಶ್ವರ ದೇವಸ್ಥಾನ, ಬಂಡೆ ರಾಚೋಟೇಶ್ವರ ದೇವಸ್ಥಾನಗಳಿದ್ದು, ಸಾವಿರಾರು ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಈಗ ಇದಕ್ಕೆ ಹೊಸ ಸೇರ್ಪಡೆ ಉದ್ಯಾನವನ.
ಗ್ರಾಮ ಹೊರವಲಯದ 63 ಎಕರೆ ಜಾಗದಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ಸುಂದರ ಉದ್ಯಾನವನವೊಂದು ತಲೆಎತ್ತಿದೆ. ದಾರಿ ಹೋಕರನ್ನು ಇದು ಆಕರ್ಷಿಸುತ್ತಿದೆ.
ಏನೇನು ಇದೆ?
ಉದ್ಯಾನ ವನದಲ್ಲಿ ಹಚ್ಚಹಸರಿನ ಲಾನ್ ನಿರ್ಮಾಣವಾಗಿದೆ. ಪರಗೋಲ, ರಸ್ತೆ, ಪೈಪ್ಲೈನ್, ಹೊಂಡ ಸೇರಿದಂತೆ ಉದ್ಯಾನವನಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಅಲ್ಲಿ ಅಳವಡಿಸಲಾಗಿದೆ.
14 ಲಕ್ಷ ಖರ್ಚು:
ಸಾಮಾಜಿಕ ಅರಣ್ಯ ವಿಭಾಗದಿಂದ ಸರ್ಕಾರಿ ಜಾಗದಲ್ಲಿ ಈ ಉದ್ಯಾನ ನಿರ್ಮಾಣ ಮಾಡಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
₹14ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಉದ್ಯಾನ ವನ ಪಕ್ಕದಲ್ಲಿ ಹೊಂಡ ನಿರ್ಮಾಣ ಮಾಡಿ ಬೋಟಿಂಗ್, ಚೆಕ್ ಡ್ಯಾಂ, ರಾಶಿ ವನ, ನಕ್ಷತ್ರ ವನ, ನೀರಿನ ಆಟಗಳಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಮೂರು ಸಾವಿರ ಸಸಿ:
ಉದ್ಯಾನದ ಜೊತೆಗೆ ಇಲ್ಲಿ ಸಸ್ಯ ಕ್ಷೇತ್ರ (ನರ್ಸರಿ) ಮಾಡಲಾಗಿದೆ. ಈಗಾಗಳೇ ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾಟಿ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಬೇವು, ಹೊಂಗೆ, ಆಲ, ಬಸರಿಗಿಡ, ನೇರಳೆ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗುತ್ತಿದೆ.
ಸಾಮಾಜಿಕ ಅರಣ್ಯ ವಿಭಾಗದಿಂದ ₹14 ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಕಾಳೆಬೆಳಗುಂದಿ ದೇವಸ್ಥಾನಗಳಿಗೆ ಬರುವ ಭಕ್ತರು ಇಲ್ಲಿಗೂ ಭೇಟಿ ನೀಡಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆಎನ್.ಕೆ.ಬಗಾಯತ್ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.