ಯಾದಗಿರಿ: ನಗರ ಹೊರ ವಲಯದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಬಂದ್ ಆದ ಕಾರಣದಿಂದ ಉಸಿರಾಟ ಸಮಸ್ಯೆಯಿಂದ ಒದ್ದಾಡಿ ಕೋವಿಡ್ ಸೋಂಕಿತ ಯುವಕ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರ ಆರೋಪವಾಗಿದೆ.
ತಾಲ್ಲೂಕಿನ ನಾಗರಬಂಡಿ ಗ್ರಾಮದ 30 ವರ್ಷದ ಸೋಂಕಿತ ಯುವಕ ಕಳೆದ ಮೂರು ದಿನಗಳ ಹಿಂದೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ ಜಾವ ಎರಡು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಿದ್ದರಿಂದ ಆಕ್ಸಿಜನ್ ಪೂರೈಕೆಯಾಗದೇ ಯುವಕ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಗಳ ದೂರಾಗಿದೆ.
ಸೋಂಕಿತನಿಗೆ ಆಕ್ಸಿಜನ್ ಸಮಸ್ಯೆ ಅರಿತು ಟವೆಲ್ ಮೂಲಕ ಗಾಳಿ ಬೀಸಿ ಬದುಕಿಸಲು ಯತ್ನಿಸಿದ್ದಾರೆ. ಕಳೆದ ವರ್ಷ ಯುವಕ ಶಿಕ್ಷಕ ನೌಕರಿ ಪಡೆದುಕೊಂಡಿದ್ದರು.
ಈ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ಹಿರೇಮಠ ಮಾತನಾಡಿ, ‘ಆಕ್ಸಿಜನ್ ಕೊರತೆಯಿಂದ ಯುವಕ ಸಾವನ್ನಪ್ಪಿಲ್ಲ. ವಿದ್ಯುತ್ ಇಲ್ಲದಿದ್ದರೂ ಆಕ್ಸಿಜನ್ ಪೂರೈಕೆಗೆ ಸಮಸ್ಯೆ ಇಲ್ಲ. ವಿದ್ಯುತ್ ಸ್ಥಗಿತವಾಗುವುದಕ್ಕೆ ಮುನ್ನವೇ ಯುವಕ ಸಾವನ್ನಪ್ಪಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.