ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ಅವ್ಯವಹಾರ ಆರೋಪ

Last Updated 8 ಏಪ್ರಿಲ್ 2022, 5:11 IST
ಅಕ್ಷರ ಗಾತ್ರ

ಸುರಪುರ: ಕೃಷ್ಣಾ ಭಾಗ್ಯ ಜಲ ನಿಗಮದ ವಿವಿಧ ಯೋಜನೆಗಳಡಿ ₹1,136 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಒಕ್ಕೂಟದ ಮುಖಂಡರು ಗುರುವಾರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.

ಒಕ್ಕೂಟದ ರಾಜ್ಯ ಘಟಕ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘2017-18 ಮತ್ತು 19-20ನೇ ಸಾಲಿನ ಎಎಸ್‍ಪಿ, ಟಿಎಸ್‍ಪಿ ಯೋಜನೆಯಡಿ ಮೀಸಲಿಟ್ಟ ₹300 ಕೋಟಿ ಅನುದಾನವನ್ನು ಕರ್ತವ್ಯದಲ್ಲಿದ್ದ ಅಧಿಕಾರಿಗಳು ಯಾವುದೇ ಕಾಮಗಾರಿ ಮಾಡದೆ ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಇಲಾಖೆ ವ್ಯಾಪ್ತಿಯ ಉಪ ವಿಭಾಗಗಳಲ್ಲಿ ಚೆಕ್ ಡ್ಯಾಂ ನಿರ್ಮಿಸದೆ ಬೋಗಸ್ ಬಿಲ್ ಎತ್ತಲಾಗಿದೆ. 2019-20 ಸಾಲಿನಲ್ಲಿ ಬಳಕೆ ಆಗದೆ ಉಳಿದಿದ್ದ ₹401.77 ಕೋಟಿ ಹಾಗೂ 2020-21 ಸಾಲಿನಲ್ಲಿ ಬಿಡುಗಡೆಯಾಗಿದ್ದ ₹384.86 ಕೋಟಿ ಅನುದಾನವನ್ನು ಎಸ್‌ಸಿ ಮತ್ತು ಎಸ್‌ಟಿ ಸಂಬಂಧಪಡದ ಇತರೆ ಕಾಮಗಾರಿಗಳ ಹೆಸರಿನಲ್ಲಿ ವರ್ಗಾಯಿಸಿಕೊಂಡಿದ್ದಾರೆ’ ಎಂದು ದೂರಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ, ಪುನರ್ ವಸತಿ ಹಾಗೂ ಪುನರ್ ನಿರ್ಮಾಣದ ಹೆಸರಲ್ಲಿ ಸಂಪೂರ್ಣ ಬೋಗಸ್ ಮಾಡಿದ್ದಾರೆ. ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಮತ್ತು ಇತರೆ ಹೆಡ್‍ಗಳಲ್ಲಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತ ತನಿಖೆಗೆ ಜಲಸಂಪನ್ಮೂಲ ಇಲಾಖೆ ವೀಕ್ಷಣ ದಳಕ್ಕೆ ಆದೇಶಿಸಿದೆ. ಇದುವರಿಗೂ ತನಿಖೆಯೇ ನಡೆದಿಲ್ಲ ಎಂದು ಆಪಾದಿಸಿದರು.

‘ವೀಕ್ಷಣಾ ದಳಕ್ಕೆ ವಹಿಸಿರುವ ತನಿಖೆಯನ್ನು ಕೈ ಬಿಟ್ಟು ಲೋಕಾಯುಕ್ತರಿಗೆ ವಹಿಸಬೇಕು. ಸೇವೆಯಿಂದ ನಿವೃತ್ತಗೊಂಡ ಅಂದಿನ ವ್ಯವಸ್ಥಾಪಕ ನಿರ್ದೇಶಕರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದರು.

ತಹಶೀಲ್ದಾರ್ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಧರ್ಮಣ್ಣ ಹುಲಿಮನಿ, ಕೃಷ್ಣಾ ಕಕ್ಕೇರಾ, ಗೋಣೇಶ, ಕೇಶವ ನಾಯಕ, ಹಣಮಂತ್ರಾಯ, ದೇವಪ್ಪ ರತ್ತಾಳ, ದೇವಿಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT