ಸುರಪುರ: ತಾಲ್ಲೂಕಿನ ದೇವಿಕೇರಾ, ಬಾದ್ಯಾಪುರ, ಹೆಮನೂರ, ಲಕ್ಷ್ಮೀಪುರ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ, ಶಾಸಕ ರಾಜೂಗೌಡ ಭೇಟಿ ನೀಡಿದರು.
ಆಯಾ ಗ್ರಾಮ ಪಂಚಾಯತ ವ್ಯಾಪ್ತಿಯ ಪಿಡಿಒ, ಅಂಗನವಾಡಿ, ಆಶಾ ಮತ್ತು ಆರೋಗ್ಯ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.
ಗ್ರಾಮಗಳಲ್ಲಿ ಆರೋಗ್ಯ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಕೈಗೊಂಡಿರುವ ಕಾರ್ಯ ವಿಧಾನಗಳ ಬಗ್ಗೆ ಪರಿಶೀಲಿಸಿದರು. ಲಸಿಕೆ ಹಾಗೂ ಪೌಷ್ಠಿಕ ಆಹಾರ ವಿತರಣೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಮಾಹಿತಿ ಪಡೆದರು. ಕೊರೊನಾ ಗ್ರಾಮೀಣ ಪ್ರದೇಶಕ್ಕೆ ಹರಡದಂತೆ ಗ್ರಾಮದ ಜನರಲ್ಲಿ ಅರಿವು ಮೂಡಿಸಬೇಕು ಎಲ್ಲರು ಜಾಗೃತೆ ವಹಿಸಿ ಕೆಲಸ ಮಾಡಬೇಕು ಎಂದರು.
‘18 ವರ್ಷದ ಮೇಲ್ಪಟ್ಟವರಿಗೆ ಲಸಿಕೆಹಾಕಲಾಗುತ್ತಿದೆ. ಅಂಗನವಾಡಿ ಕೇಂದ್ರ, ಪ್ರಾಥಮಿಕ, ಸಮುದಾಯ ಮತ್ತು ಉಪ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ತಿರುಗಾಡಿ ಪ್ರತಿಯೊಬ್ಬರನ್ನು ಕರೆ ತಂದು ಲಸಿಕೆ ಹಾಕಿಸುವ ಕೆಲಸ ಮಾಡಬೇಕು. ಲಸಿಕೆ ಅಭಿಯಾನದಲ್ಲಿ ಶೇ 100ರಷ್ಟು ಗುರಿ ತಲುಪಲು ಎಲ್ಲರೂ ಸೇರಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.
‘ಕೊರೊನಾ ಮೂರನೆ ಅಲೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮುನ್ಸೂಚನೆ ನೀಡಿದೆ. ಹೀಗಾಗಿ ನಾವು ಲಸಿಕೆ ಅಭಿಯಾನ ಪೂರ್ಣಗೊಳಿಸಬೇಕಿದೆ. ಲಸಿಕೆ ಕೊರತೆ ಆದಲ್ಲಿ ತಕ್ಷಣವೇ ಗಮನಕ್ಕೆ ತರಬೇಕು. ಯಾರು ನಿರ್ಲಕ್ಷ ವಹಿಸದಂತೆ ನೋಡಿಕೊಳ್ಳಬೇಕು. ಅಂತರ ಕಾಯ್ದುಕೊಂಡು ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿ ಹೇಳಬೇಕು’ ಎಂದು ತಿಳಿಸಿದರು.