ಯಾದಗಿರಿ: ‘ರಾಜ್ಯದಲ್ಲಿ ಕಾಂಗ್ರೆಸ್– ಜೆಡಿಎಸ್ ಪಕ್ಷಗಳು ನಾಟಕ ಕಂಪನಿಗಳಾಗಿವೆ’ ಎಂದು ಸಚಿವ ಬಿ.ಶ್ರೀರಾಮುಲುವ್ಯಂಗ್ಯವಾಡಿದರು.
ಜಿಲ್ಲೆಯ ಯಕ್ಷಿಂತಿ ಗ್ರಾಮದಲ್ಲಿ ನೂರಾರು ಹೆಕ್ಷೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವುದನ್ನು ಗುರುವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ವರು ಮಾತನಾಡಿದರು.
‘ಕುಮಾರಸ್ವಾಮಿಯವರು ಸಾಂದರ್ಭಿಕ ಶಿಶು ಎಂದು ಹೇಳಿಕೊಳ್ಳುತ್ತಿದ್ದರು. ಅಲ್ಲದೆ ದೇವರ ಸರ್ಕಾರ ಕೂಡ ಎನ್ನುತ್ತಿದ್ದರು. ಈಗ ಒಬ್ಬರ ಮೇಲೆ ಮತ್ತೊಬ್ಬರು ದೂರುತ್ತಾ ಕಾಲ ಕಳೆಯುತ್ತಿದ್ದಾರೆ’ ಎಂದರು.
‘ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ತವರು ಜಿಲ್ಲೆಗೂ ತೆರಳದೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇವೆ. ಶನಿವಾರ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವರದಿ ಒಪ್ಪಿಸುತ್ತೇವೆ’ ಎಂದು ತಿಳಿಸಿದರು.
‘ಗ್ರಾಮದಲ್ಲಿ ಮರಳು ಗಣಿಗಾರಿಕೆ ಇದೆ. ಇದನ್ನು ತಪ್ಪಿಸಬೇಕು ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿದರು. ಸರ್ಕಾರ ನೆರೆ ಸಂತ್ರಸ್ತರ ಜೊತೆ ಇದೆ. ಮರಳು ಗಣಿಗಾರಿಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದರು.
ಸಚಿವ ಪ್ರಭು ಚವಾಣ ಮಾತನಾಡಿ, ‘ಈಗಾಗಲೇ ರಾಯಚೂರು, ಯಾದಗಿರಿಯಲ್ಲಿ ಪ್ರವಾಹದ ಪರಿಸ್ಥಿತಿ ಅವಲೋಕಿಸಿದ್ದೇವೆ. ಶುಕ್ರವಾರ ಬಳ್ಳಾರಿಗೆ ತೆರಳಿ ಅಲ್ಲಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗೆ ವರದಿ ಸಲ್ಲಿಸುತ್ತೇವೆ’ ಎಂದರು.
ಸೆಲ್ಫಿಗೆ ಮುಗಿಬಿದ್ದ ಯುವ ಜನತೆ:
ನೂತನ ಸಚಿವರು ಬೆಳೆಹಾನಿ ವೀಕ್ಷಣೆಗೆ ತೆರಳಿದ ವೇಳೆ ಅಲ್ಲಿನ ಗ್ರಾಮದಯುವಕರು ಸೆಲ್ಫಿಗಾಗಿ ಮುಗಿಬಿದ್ದರು. ಈ ವೇಳೆ ಸಚಿವ ಶ್ರೀರಾಮುಲು ಅವರು ಸೆಲ್ಫಿಗೆ ಪೋಸ್ ನೀಡಿದರು.
ನಂತರ ಸಚಿವರು ಗೌಡೂರು, ಟೊಣ್ಣೂರು, ಕೊಳ್ಳೂರು ಗ್ರಾಮಗಳಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿದರು.
ಶಾಸಕ ವೆಂಕಟರಡ್ಡಿಗೌಡ ಮುದ್ನಾಳ, ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್., ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಇದ್ದರು.