ಅಫಜಲಪುರ: ತಾಲ್ಲೂಕಿನಲ್ಲಿ ಭೀಮಾ ಪ್ರವಾಹದಿಂದ ಮನೆಗಳು, ಬೆಳೆಗಳು ರಸ್ತೆ ಸೇರಿದಂತೆ ₹ 80 ಕೋಟಿ ಹಾನಿಯಾಗಿದೆ. ಸರ್ಕಾರ ತಕ್ಷಣ ಪರಿಹಾರ ನೀಡಬೇಕೆಂದು ಶಾಸಕ ಎಂ.ವೈ.ಪಾಟೀಲ ಒತ್ತಾಯಿಸಿದರು.
ಭೀಮಾ ಪ್ರವಾಹಕ್ಕೆ ಒಳಗಾಗಿರುವ ತಾಲ್ಲೂಕಿನ ಜೇವರ್ಗಿ(ಬಿ), ಭಂಕಲಗಾ, ಗೌರ(ಕೆ), ಗೌರ(ಬಿ) ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ನಂತರ ಮಾತನಾಡಿದ ಅವರು, ಜನರು ಕಷ್ಟದಲ್ಲಿದ್ದಾರೆ. ಅವರಿಗೆ ತುರ್ತಾಗಿ ಪರಿಹಾರ ಬೇಕಿದೆ ಎಂದರು.
ಪ್ರವಾಹ ನಿಂತ ತಕ್ಷಣ ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಜಂಟಿಯಾಗಿ ಪ್ರತಿ ರೈತರ ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಬೇಕು. ಸರ್ಕಾರವು ಸಹ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು. ಸರ್ಕಾರ ಪರಿಹಾರ ನೀಡುವಲ್ಲಿ ಅಸಡ್ಡೆ ಮಾಡಬಾರದು. ಸಂತ್ರಸ್ತರು ಕಷ್ಟದಲ್ಲಿದ್ದಾರೆ ಎಂದು ಚಿಂತೆಯಲ್ಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಶಿರಸಗಿ, ಜಿ.ಪಂ ಮಾಜಿ ಸದಸ್ಯರಾದ ಪ್ರಕಾಶ ಜಮಾದಾರ, ಸಂಗನಗೌಡ ಪಾಟೀಲ ಸೊನ್ನ, ಶ್ರೀಶೈಲ ಪಾಟೀಲ ಗೌರ, ಸಂತೋಷ ವಗದರಗಿ, ಸಿದ್ದು ಶಿರಸಗಿ, ದುಂಡೇಶ ಗೌರ, ವಿಶ್ವನಾಥ ಕಾಮನಳ್ಳಿ, ಕಲ್ಲಪ್ಪ ಪ್ಯಾಟಿ, ವಿಠ್ಠಲ ಜಾಮಗೊಂಡ ಇದ್ದರು.