ಯಾದಗಿರಿ: ‘ದೇಶದ ಬೆನ್ನೆಲುಬಾಗಿರುವ ರೈತರನ್ನು ಎಲ್ಲ ಅಧಿಕಾರಿಗಳು ಗೌರವಿಸಬೇಕು. ಯೋಜನೆಗಳ ಕುರಿತು ಅವರಿಗೆ ಸಂಪೂರ್ಣ ಮಾಹಿತಿ ತಲುಪಿಸಿ ತಿಳಿವಳಿಕೆ ನೀಡಬೇಕು. ಅಂದಾಗ ಮಾತ್ರ ಅವರಿಗೆ ಸಹಕಾರ ದೊರೆಯುತ್ತದೆ’ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ರೈತರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರೈತರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದು ಮುಂದೆ ಬರಬೇಕು.ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರೈತರ ಪರ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಯಾವ ರೈತರು ಆತಂಕ ಪಡಬಾರದು. ರೈತರ ಏಳಿಗೆಗೆ ನಮ್ಮ ಸರ್ಕಾರ ಸದಾ ಸ್ಪಂದಿಸುತ್ತದೆ. ರೈತರ ಪರವಾಗಿ ನಿಲ್ಲುತ್ತದೆ’ ಎಂದರು.
‘ಅಧಿಕಾರಿಗಳು ಯಾವುದೇ ಕಾರಣಕ್ಕೂ ಅರ್ಹ ರೈತರು ಸರ್ಕಾರದ ಸೌಕರ್ಯಗಳಿಂದ ವಂಚಿತವಾಗದಂತೆ ಕಾಳಜಿವಹಿಸಬೇಕು’ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶರಣಗೌಡ ಕಾಳಬೆಳಗುಂದಿ ಮಾತನಾಡಿ, ‘ಸರ್ಕಾರದಿಂದ ರೈತರಿಗೆ ಸಿಗುವ ಎಲ್ಲ ಅನುಕೂಲಗಳನ್ನು ರೈತರಿಗೆ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಭೀಮರೆಡ್ಡಿ ಕೂಡ್ಲೂರ, ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.