ಯಾದಗಿರಿ: ‘ದೇಶಕ್ಕಾಗಿ ಪ್ರಾಣವನ್ನೇ ಬಲಿದಾನ ಮಾಡುವ ದೇಶದ ವೀರಯೋಧರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು’ ಎಂದು ಯುವ ಬ್ರಿಗೆಡ್ ಜಿಲ್ಲಾ ಸಂಚಾಲಕ ಸಂಗಮೇಶ ಕೆಂಭಾವಿ ಹೇಳಿದರು.
ವಡಗೇರಾ ತಾಲ್ಲೂಕಿನ ನಾಯ್ಕಲ್ ಲಿಟಲ್ರಾಕ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತದ ಮುಕುಟಪ್ರಾಯ ಕಾರ್ಗಿಲ್ ಪ್ರದೇಶವನ್ನು ಶತ್ರುರಾಷ್ಟ್ರ ಆಕ್ರಮಿಸಿಕೊಳ್ಳಲು ಎರಡು ದಶಕದ ಹಿಂದೆ ನಡೆಸಿದ್ದ ಕುತಂತ್ರವನ್ನು ನಮ್ಮ ವೀರಯೋಧರು ವಿಫಲಗೊಳಿಸಿ ತಮ್ಮ ಪ್ರಾಣವನ್ನು ಸಮರ್ಪಿಸಿದ್ದಾರೆ.
ಕಾರ್ಗಿಲ್ ಪ್ರದೇಶವನ್ನು ಭಾರತದ ವಶಕ್ಕೆ ಪಡೆದುಕೊಳ್ಳಲು 500ಕ್ಕೂ ಹೆಚ್ಚು ಯೋಧರು ವೀರ ಮರಣವನ್ನಪ್ಪಿದ್ದಾರೆ. ನಮ್ಮ ಯೋಧರ ಧೈರ್ಯವನ್ನು ವಿಶ್ವದ ಅನೇಕ ರಾಷ್ಟ್ರಗಳು ಕೊಂಡಾಡುತ್ತಿವೆ’ ಎಂದರು.
‘ದೇಶಕ್ಕಾಗಿ ಹಗಲು-ರಾತ್ರಿ, ಮಳೆ, ಬಿಸಿಲೆನ್ನದೆ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಣೆ ಮಾಡುತ್ತಿರುವ ಯೋಧರ ಬಗ್ಗೆ ಯುವ ಪೀಳಿಗೆ ಗೌರವದಿಂದ ಕಾಣಬೇಕು’ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ನಿಖಿಲ್ ಪಾಟೀಲ, ವಿಶ್ವನಾಥ ಯಾದವ್, ವಿಕಾಸ ಚವ್ಹಾಣ, ವೆಂಕಟೇಶ ಕಲಬುರ್ಗಿ, ಸಂಗಾರಡ್ಡಿ ಪಾಟೀಲ ಇದ್ದರು.