ಮೊಟನಹಳ್ಳಿ (ಯರಗೋಳ): ‘ಮಾನವ ಹಕ್ಕುಗಳ ರಕ್ಷಣೆ ಅಗತ್ಯ’ ಎಂದು ನ್ಯಾಯಾಧೀಶರಾದ ಶಾಹೀಲ್ ಅಹ್ಮದ್ ಖುನ್ನಬಾವಿ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಹಕ್ಕುಗಳ ಉಲ್ಲಂಘನೆಯಾದಾಗ ಎಲ್ಲರೂ ಸೇರಿ ಹೋರಾಟ ನಡೆಸಿ ಅವುಗಳನ್ನು ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ನೆರವು ಪಡೆದುಕೊಳ್ಳಬೇಕು ಎಂದರು.
ಡಾ.ಹಣಮಂತ್ರಾಯ ಸಿ.ಕರಡ್ಡಿ ಮಾತನಾಡಿ,‘ಮಕ್ಕಳು ವಸತಿ ಶಾಲೆಯ ಸದುಪಯೋಗ ಪಡೆದುಕೊಳ್ಳಬೇಕು. ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆ ನೀಡುವುದು ಕಂಡುಬಂದರೆ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಬೇಕು’ ಎಂದು ಅವರು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಪ್ರಸನ್ನ ದೇಶಮುಖ ಮಾತನಾಡಿ,‘ಮಾನವ ಹಕ್ಕುಗಳನ್ನು ರಕ್ಷಿಸಲು ಎಲ್ಲರೂ ಕೈ ಜೋಡಿಸೋಣ’ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಶಾಂತರಾಮ್ ಶೆಟ್ಟಿ ಮಾನವ ಹಕ್ಕುಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಸ್ವಾಗತಿಸಿ, ನಿರೂಪಿಸಿದರು.