ಯಾದಗಿರಿ:ಜಿಲ್ಲೆಗೆ ಪ್ರವಾಹದ ಹಾನಿ ಕುರಿತು ಪರಿಶೀಲಿಸಲು ಬಂದಿದ್ದೇನೆ; ಹೊರತು ರೋಡ್ ಶೋ ಮಾಡಲು ಬಂದಿಲ್ಲ. ಹೀಗಾಗಿ ಇಲ್ಲಿನ ಹಾನಿ ಕುರಿತು ಸಿಎಂಗೆ ಇಂಚಿಂಚು ಮಾಹಿತಿ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.
ಭಾನುವಾರ ಜಿಲ್ಲೆಯ ಪ್ರವಾಹದಿಂದ ಹಾನಿಯಾದ ಮಡ್ನಾಳ, ಶಿರವಾಳ, ಶಿವನೂರ, ಜೋಳದಡಗಿ ಸೇತುವೆ, ಬೆಂಡೆಬೆಂಬಳಿ ಗ್ರಾಮದ ಕಾಳಜಿ ಕೇಂದ್ರ, ಪ್ರವಾಹ ಹಾನಿ ಸಂತ್ರಸ್ತರನ್ನು ಭೇಟಿ ಮಾಡಿ ಮಾತನಾಡಿದರು.
ಭೀಮಾ ನದಿಗೆ 8 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತದೆ ಎನ್ನುವ ಮಾಹಿತಿ ಇದೆ. ಆದರೆ, ಜಿಲ್ಲೆಗೆ ಇನ್ನೂ ಬಂದಿಲ್ಲ. ಭಾನುವಾರ 3 ಲಕ್ಷಕ್ಕೂಅಧಿಕಕ್ಯುಸೆಕ್ ನೀರು ಬರುತ್ತಿದೆ. ಸೋಮವಾರಜಿಲ್ಲೆಗೆ ಪ್ರವಾಹದ ನೀರು ಬರಬಹುದು. ಈ ಬಗ್ಗೆ ಮುನ್ನಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಕೃಷ್ಣ ಮತ್ತು ಭೀಮಾ ನದಿಯ ಪ್ರವಾಹದಿಂದ ಸಾಕಷ್ಟು ಪ್ರಮಾಣ ಹಾನಿಯಾಗಿದೆ. ನದಿ ಪಾತ್ರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ಸಂಕಷ್ಟದಲ್ಲಿದ್ದು, ರೈತರು ಬೆಳೆದ ಬೆಳೆಯು ಅಪಾರ ಪ್ರಮಾಣ ಹಾನಿಯಾಗಿದ್ದು, ಹಾನಿ ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಯಾವ ಬೆಳೆಗಳು ಎಷ್ಟು ಹಾನಿಯಾಗಿವೆ ಎಂದು ಶೀಘ್ರವಾಗಿ ವರದಿ ನೀಡಬೇಕು ಎಂದು ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವಡಗೇರಾ ತಾಲ್ಲೂಕಿನಲ್ಲಿ ಕೃಷ್ಣ ಮತ್ತು ಭೀಮಾ ನದಿಯ ಪ್ರವಾಹದಿಂದ ಹಲವಾರು ಗ್ರಾಮದಲ್ಲಿ ನೀರು ಮನೆಗಳಿಗೆ ನುಗ್ಗಿದ್ದು ಅವರು ಸಂಕಷ್ಟದಲಿದ್ದಾರೆ. ಭೀಮಾ ನದಿಯಿಂದ ಜಲಾವೃತಗೊಂಡ ಶಿವನೂರು ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಸಚಿವರು, ಶಿವನೂರ ಗ್ರಾಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮನೆಗಳಿಗೆ ನೀರು ನುಗ್ಗಿದೆ.ಆ ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ನೀರು ನುಗ್ಗಿದ ಮನೆಗಳಿಗೆ ತಲಾ ₹10 ಸಾವಿರ ಪರಿಹಾರ ತ್ವರಿತವಾಗಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳ ಪಟ್ಟಿ ಸಿದ್ಧ ಪಡಿಸಲಾಗುವುದು ಹಾಗೂ ಅಧಿಕಾರಿಗಳ ಸಮಿತಿ ರಚನೆ ಮಾಡಿ ಬೆಳೆ ಹಾನಿ ಸರ್ವೆ ಮಾಡಿಸಿ ಸರ್ಕಾರದಿಂದ ಪರಿಹಾರ ನೀಡಲಾಗುವದು ಎಂದು ಸಚಿವರು ಹೇಳಿದರು.
ಈವೇಳೆಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾ ಪಂಚಾಯಿತಿಅಧ್ಯಕ್ಷ ಬಸವನಗೌಡ ಪಾಟೀಲ ಯಡಿಯಾಪುರ,ಉಪವಿಭಾಗಾಧಿಕಾರಿಶಂಕರಗೌಡ ಸೋಮನಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕಿಆರ್.ದೇವಿಕಾ, ತಹಶೀಲ್ದಾರ್ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.
‘15 ದಿನದಲ್ಲಿ ಮತ್ತೆ ಭೇಟಿ ನೀಡುತ್ತೇನೆ’
ಜಿಲ್ಲಾ ಉಸ್ತುವಾರಿ ಸಚಿವರಾಗಿ ಪದೇ ಪದೇ ಜಿಲ್ಲೆಗೆ ಭೇಟಿ ನೀಡಬೇಕು. ಆದರೆ, ಜಿಲ್ಲೆಗೆ ಬರುವುದೇ ಕಡಿಮೆಯಾಗಿದೆಯಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಭು ಚವ್ಹಾಣ್, ಮತದಾರರ ಸೇವೆಗೆ ತಮ್ಮನ್ನು ಆರಿಸಿ ಕಳಿಸಿದ್ದಾರೆ. ಹೀಗಾಗಿ ಈ ಬಾರಿ ನನಗೆ ಕೋವಿಡ್ ಬಂದಿದ್ದರಿಂದ ಜಿಲ್ಲೆಗೆ ಬರಲು ಸ್ವಲ್ಪ ತಡವಾಗಿದೆ. ಆದರೆ, ಮುಂದಿನ 15 ದಿನಗಳಲ್ಲಿ ಮತ್ತೆ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಅಕ್ಟೋಬರ್ 22ಕ್ಕೆ ಸಚಿವ ಸಂಪುಟ ಸಭೆ ಇದೆ. 21ರಂದು ಸಿಎಂ ಅವರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಾರೆ ಎನ್ನುವ ಮಾಹಿತಿ ಬಂದಿದೆ. ಮುಂದಿನ ಕಾರ್ಯಕ್ರಮ ತಿಳಿಸಲಾಗುವುದು ಎಂದರು.
ಜೋಳದಡಗಿ ಸೇತುವೆ ರಸ್ತೆ ಎತ್ತರಗೊಳಿಸಲು ಕೆಬಿಜೆಎನ್ಎಲ್ ಅಧಿಕಾರಿಗಳ ಚರ್ಚಿಸಲಾಗುವುದು ಎಂದರು. ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸಿಎಂ ಎಂದರೆ ದೊಡ್ಡ ಮಾತಾ ಇದ್ದಂತೆ ಎಂದರು.
‘ಅತಿವೃಷ್ಟಿ ಪೀಡಿತ ಜಿಲ್ಲೆ ಘೋಷಣೆ’
ಜಿಲ್ಲೆಯಲ್ಲಿ 18,400 ಹೆಕ್ಟೇರ್ ಬೆಳೆ ನಾಶವಾಗಿದೆ. 20 ಕಿ.ಮೀ ಎಸ್ಎಸ್ ರಸ್ತೆ, 18 ಕಿ.ಮೀ ಜಿಲ್ಲಾ ರಸ್ತೆ ಹಾಳಾಗಿದೆ. 56 ಸೇತುವೆಗಳಿಗೆ ಹಾನಿಯಾಗಿದೆ. ಹೀಗಾಗಿ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ ಎಂದರು. ಈ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
***
ಜೋಳದಡಗಿ ಬ್ರಿಜ್ ಕಂಬ್ಯಾರೇಜ್ ನಿರ್ವಹಣೆ ಜೊತೆಗೆ ರಸ್ತೆ ದುರಸ್ತಿಗೆ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಬೇಕು.
-ಪ್ರಭು ಚವ್ಹಾಣ್,ಜಿಲ್ಲಾ ಉಸ್ತುವಾರಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.