ಸುರಪುರ: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಕ್ರಾಂತಿಯನ್ನು ಬಿತ್ತಿದ ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಶಿಕ್ಷಣದ ಜತೆಗೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕೊಡುಗೆ ನೀಡುತ್ತಿರುವುದು ಅನನ್ಯ’ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ. ಸುರೇಶ ಸಜ್ಜನ ಹೇಳಿದರು.
ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ. ಶರಣಬಸವಪ್ಪ ಅಪ್ಪಾ ಸಭಾಮಂಟಪದ ಉದ್ಘಾಟನೆ, ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ-2022 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘2010ರಲ್ಲಿ ಆರಂಭವಾದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜು ಅನೇಕ ವಿದ್ಯಾರ್ಥಿಗಳ ಬದುಕು ಕಟ್ಟಿಕೊಟ್ಟಿದ್ದು ಇಂದು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ’ ಎಂದರು.
ಕಾರ್ಯದರ್ಶಿ ಶರಣಬಸವಪ್ಪ ನಿಷ್ಠಿ ಅವರು ಎಂಜಿನಿಯರಿಂಗ್ ಶಿಕ್ಷಣಕ್ಕಾಗಿ 12 ಎಕರೆಯ ₹25 ಕೋಟಿಗೂ ಹೆಚ್ಚು ಮೊತ್ತದ ಭೂಮಿಯನ್ನು ದಾನ ಕೊಟ್ಟಿರುತ್ತಾರೆ. ಸಂಸ್ಥೆಯ ಬೆಳವಣಿಗೆ ಅವರು ಅಪಾರವಾಗಿ ಶ್ರಮಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಕಾರ್ಯದರ್ಶಿ ಶರಣಬಸವಪ್ಪ ನಿಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವರಾಜ ಜಮದ್ರಖಾನಿ ಮಾತನಾಡಿದರು. ಬಸವರಾಜ ನಿಷ್ಠಿ ದೇಶಮುಖ, ಜನಾರ್ಧನ ಪಾಣಿಭಾತೆ, ಪ್ರಾಚಾರ್ಯ ಡಾ. ಶರಣಬಸಪ್ಪ ಸಾಲಿ, ಅಶೋಕ ಪಾಟೀಲ, ಶರಣಗೌಡ ಪಾಟೀಲ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿಗಳು ಸಿದ್ದಪಡಿಸಿದ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯಿತು. ಕಾಲೇಜಿನಲ್ಲಿ ಕಲಿತು ಸಾಧನೆಗೈದ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೀರಭದ್ರಪ್ಪ ನಿಷ್ಠಿ, ಬಸವರಾಜಪ್ಪ ಅಪ್ಪಾ, ನೀಲಮ್ಮ ತಾಯಿ ನಿಷ್ಠಿರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಪ್ರೊ. ಮೋಹನರೆಡ್ಡಿ ದೇಸಾಯಿ ನಿರೂಪಿಸಿದರು. ಪ್ರೊ. ಆನಂದ ಬಿರಾದಾರ ಸ್ವಾಗತಿಸಿದರು. ಪ್ರೊ. ನಾನಾಗೌಡ ದೇಸಾಯಿ ವಂದಿಸಿದರು.