ಯಾದಗಿರಿ: ನಗರದ ಹೃಯದ ಭಾಗದಲ್ಲಿರುವ ಲುಂಬಿನ ವನಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್., ಭೇಟಿ ನೀಡಿ ಪರಿಶೀಲಿಸಿದರು. ಲುಂಬಿನಿ ವನದಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೆಪ್ಟೆಂಬರ್ 22ರಂದು ‘ಸುಂದರ ಲುಂಬಿನಿ ಈಗ ಅಧ್ವಾನ’ ಎಂಬ ವಿಶೇಷ ವರದಿಯನ್ನು ‘ಪ್ರಜಾವಾಣಿ’ ಪ್ರಕಟಿಸಿತ್ತು. ಅಲ್ಲಿನ ಅವ್ಯವಸ್ಥೆ ಕುರಿತು ಬೆಳಕು ಚೆಲ್ಲಿತ್ತು. ಸ್ವಚ್ಛತೆ ಇಲ್ಲದಿರುವ ಕುರಿತು ಪ್ರಸ್ತಾವಿಸಲಾಗಿತ್ತು.
‘ಈ ಸಲ ಹೆಚ್ಚಿನ ಮಳೆಯಾಗಿದ್ದರಿಂದ ವನದ ಒಳಗಡೆ ನೀರು ನಿಂತಿದೆ. ಹೀಗಾಗಿ ಸ್ವಚ್ಛತೆ ಬಗ್ಗೆ ಗಮನಹರಿಸಿ. ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಉದ್ಯಾನವನಕ್ಕೆ ಬರುವ ಸಾರ್ವಜನಿಕರಿಗೆ ಮಾಸ್ಕ್, ಅಂತರ ಕಾಪಾಡಿಕೊಳ್ಳಲು ತಿಳಿಸಬೇಕು. ವನದ ಒಳಗಡೆ ಚರಂಡಿ ನೀರು ಬರುವುದನ್ನು ತಡೆಯಲು ಪರಿಹಾರ ಹುಡಬೇಕು. ಉದ್ಯಾನ ಸುತ್ತಲೂ ಚರಂಡಿಗಳ ಸರ್ವೆ ಮಾಡಿ ವರದಿ ಸಲ್ಲಿಸಿ, ಸಣ್ಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ’ ಎಂದು ಸೂಚಿಸಿದರು.
‘ಉದ್ಯಾನದಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಎತ್ತರಗೊಳಿಸಿ ನೀರು ನಿಲ್ಲದಂತೆ ಮಾಡಬೇಕು. ವನದ ಸುತ್ತಲೂ ಕಲ್ಲು, ಮಣ್ಣು, ಕಸ, ತ್ಯಾಜ್ಯ ಹಾಕುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು.
ಈ ವೇಳೆ ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಭೀಮರಾಯ ಮಸಾಲಿ, ನಗರಸಭೆ ಪ್ರಭಾರಿ ಪೌರಾಯುಕ್ತ ಬಕ್ಕಪ್ಪ ಹೊಸಮನಿ, ಕೆಆರ್ಐಡಿಎಲ್ನ ಹೊನ್ನಪ್ಪ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಕಿರಣ ಸೇರಿದಂತೆ ಸಂಬಂಧಪಪಟ್ಟ ಅಧಿಕಾರಿಗಳು ಇದ್ದರು.