ಯಾದಗಿರಿ: ‘ಇದೇ ತಿಂಗಳಾಂತ್ಯದಲ್ಲಿ ಮೈತ್ರಿಸರ್ಕಾರ ಸಚಿವ ಸಂಪುಟ ವಿಸ್ತರಣೆ ಕುರಿತು ಸಮನ್ವಯ ಸಮಿತಿ ಸಭೆ ನಡೆಸಲಿದೆ. ಆದರೆ, ಜೆಡಿಎಸ್ ಪಕ್ಷದಿಂದ ನಾನು ಎಂದಿಗೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಹಾಗಾಗಿ, ಸಿಎಂ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕುವ ಪ್ರಶ್ನೆಯೇ ಇಲ್ಲ’ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಸ್ಪಷ್ಟಪಡಿಸಿದರು.
ನಗರದಲ್ಲಿ ಭಾನುವಾರ ಶಾಸಕರ ಜನಸಂಪರ್ಕ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
‘ನನಗೆ ಮತಹಾಕಿ ಗೆಲ್ಲಿಸಿರುವ ಕ್ಷೇತ್ರದ ಜನರ ಅಭಿವೃದ್ಧಿ ನನ್ನ ಗುರಿ. ಈ ಗುರಿ ಈಡೇರಿಸಲು ಸಚಿವನಾದರೆ ಮಾತ್ರ ಸಾಧ್ಯ ಎಂಬ ಭ್ರಮೆ ಇಲ್ಲ. ಏಕೆಂದರೆ, ನಾನು ಎಚ್್.ಡಿ.ದೇವೇಗೌಡ ಅವರ ಕುಟುಂಬದ ಕುಡಿ ಇದ್ದಂತೆ. ಸರಿರಾತ್ರಿ ಹೋದರೂ ಸಿಎಂ ನನಗೆ ಬೇಕಾದ ನೆರವು ನೀಡುವಾಗ ಸಚಿವ ಸ್ಥಾನ ಏಕೆ ಬೇಕು ಹೇಳಿ?’ ಎಂದರು.
‘ಯಾವ ನಿಗಮ ಮಂಡಳಿಗಳಿಗೂ ನಾನು ನೇಮಕ ಬಯಸಿಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಸಾಕಷ್ಟು ಇರುವಾಗ ನಿಗಮ ಮಂಡಳಿ ಅಭಿವೃದ್ಧಿ ಕಡೆಗೆ ಗಮನಹರಿಸಲು ನನಗೆ ಸಮಯ ಸಿಗುವುದಿಲ್ಲ. ಈ ಕುರಿತು ಸಿಎಂ ಅವರಿಗೆ ಸ್ಪಷ್ಟಪಡಿಸಿದ್ದೇನೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಯುವ ಮುಖಂಡ ಶರಣಗೌಡ ಕಂದಕೂರ ಅವರನ್ನು ನಿಗಮ ಮಂಡಳಿಗೆ ನೇಮಕ ಮಾಡಲು ಸಿಎಂ ಆಸಕ್ತಿ ತೋರಿಸಿದ್ದಾರೆ’ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ಶರಣಗೌಡ ಕಂದಕೂರು, ಎಸ್. ಬಿ. ಪಾಟೀಲ, ಲಕ್ಷ್ಮರೆಡ್ಡಿ ಅನಪೂರ. ನಿತ್ಯಾನಂದ ಸ್ವಾಮಿ ಹಂದ್ರಿಕಿ, ಅಜಯರೆಡ್ಡಿ ಎಲೇರಿ, ಬಾಲಪ್ಪ ನಿರೇಟಿ, ರಾಜಶೇಖರಗೌಡ ವಡಗೇರಾ, ಶಂಕ್ರಪ್ಪ ದಿಬ್ಬಾ, ಬಸವಂತರಾಯಗೌಡ ಸೈದಾಪುರ, ಸಿರಾಜ್ ಚಿಂತಕುಂಟಾ ಇದ್ದರು.