ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Bandh: ಪ್ರತಿಭಟನೆ, ಮನವಿಗೆ ಬಂದ್‌ ಸೀಮಿತ

ಕನ್ನಡಪರ ಸಂಘಟನೆಗಳಿಂದ ವಿನೂತನ ಪ್ರತಿಭಟನೆ, ರೈಲು ತಡೆಯಲು ಯತ್ನ, ಪೊಲೀಸ್‌ ವಶಕ್ಕೆ
Published 30 ಸೆಪ್ಟೆಂಬರ್ 2023, 4:26 IST
Last Updated 30 ಸೆಪ್ಟೆಂಬರ್ 2023, 4:26 IST
ಅಕ್ಷರ ಗಾತ್ರ

ಯಾದಗಿರಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳ ಒಕ್ಕೂಟ ಹೋರಾಟ ಪ್ರತಿಭಟನೆ, ಮನವಿಗೆ ಬಂದ್‌ ಸೀಮಿತವಾಗಿತ್ತು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರಾಜ್ಯ ಬಂದ್ ಹಿನ್ನೆಲೆ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರಿಂದ ನಗರದಲ್ಲಿ ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ಬೆಳಿಗ್ಗೆ ರೈಲ್ವೆ ನಿಲ್ದಾಣದ ಮುಖ್ಯ ದ್ವಾರದ ಬಳಿಯೇ ಪ್ರತಿಭಟನೆ ನಡೆಸಿದರು. ನಂತರ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆಯಲು ಕರವೇ ಕಾರ್ಯಕರ್ತರು ಮುಂದಾದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

‘ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ ಸಹಿಸುವುದಿಲ್ಲ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ’ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ ತಿಳಿಸಿದರು.

ನೇತಾಜಿ ವೃತ್ತ, ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ:

ನಗರದ ನೇತಾಜಿ ಸುಭಾಷ ವೃತ್ತ ಹಾಗೂ ರೈಲ್ವೆ ನಿಲ್ದಾಣ ಮುಂಭಾಗದ ಬಳಿ ಪ್ರತಿಭಟನೆ ನಡೆಯಿತು. ಬೆಳಿಗ್ಗೆಯಿಂದ ಶುರುವಾರ ಪ್ರತಿಭಟನೆ ಸಂಜೆ ವರೆಗೆ ವಿವಿಧ ಸಂಘಟನೆಗಳು ಆಗಾಗ ಬಂದು ಪ್ರತಿಭಟನೆ ಮಾಡುತ್ತಿದ್ದರು.

ನಾರಾಯಣಗೌಡ ಬಣದ ಕರವೇ ನೇತೃತ್ವದಲ್ಲಿ ಸುಭಾಷ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಕೆಲ ಕಾಲ ಹೈದರಾಬಾದ್-ವಿಜಯಪುರ ರಾಜ್ಯ ಹೆದ್ದಾರಿ ತಡೆದು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೆ ನಿಲ್ದಾಣದಲ್ಲಿ ನಾಟಕೀಯ ಬೆಳವಣಿಗೆ:

ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಬಂದ್‌ಗೆ ಬೆಂಬಲಿಸಿ ನಮ್ಮ ಕರ್ನಾಟಕ ರಕ್ಷಣೆ ಸೇನೆ ಕಾರ್ಯಕರ್ತರಿಂದ ರೈಲು ತಡೆದು ಪ್ರತಿಭಟನೆ ನಡೆಸಿರುವ ನಾಟಕೀಯ ಬೆಳವಣಿಗೆ ನಡೆಯಿತು.

ಮುಂಬೈಯಿಂದ ಚೆನ್ನೈಗೆ ತೆರಳುವ ಮೇಲ್ ರೈಲು ತಡೆಯಲು ಯತ್ನಿಸಿದ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಇನ್ನೂ ಜಯಕರ್ನಾಟಕ ಸಂಘಟನೆಯಿಂದ ರೈಲ್ವೆ ನಿಲ್ದಾಣದಲ್ಲಿ ಖಾಲಿ ಮಡಿಕೆಗಳನ್ನು ಹೊತ್ತುಕೊಂಡು ವಿನೂತನ ಪ್ರತಿಭಟನೆ ನಡೆಯಿತು.

ಜಯ ಕರ್ನಾಟಕ ಜಿಲ್ಲಾಧ್ಯಕ್ಷ ವಿಶ್ವನಾಥ ನಾಯಕ ನೇತೃತ್ವದಲ್ಲಿ ಲಾಲ್‌ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ರೈಲ್ವೆ ನಿಲ್ದಾಣವರಗೆ ಪ್ರತಿಭಟನೆ ಮೆರವಣಿಗೆ ನಡೆಯಿತು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ 20 ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು.

‘ಕಾವೇರಿ ಮತ್ತು ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಬಂದ್‌ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಎಚ್‌.ಶಿವರಾಮೇಗೌಡ ಬಣದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ಜನತೆಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಮೂರು ಬೆಳೆ ಬೆಳೆಯಲು ನೀರು ಬಿಡುವುದು ಎಷ್ಟು ಸೂಕ್ತ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಶೇ 100ರಷ್ಟು ಮಳೆ ಬೀಳುವ ಕಾವೇರಿ ಜಲಾನಯನ ಪ್ರದೇಶ ಕರ್ನಾಟಕದಾಗಿದ್ದೆ. ಆದ್ದರಿಂದ ಹೆಚ್ಚಿನ ಪಾಲು ನಮ್ಮದಾಗಿದೆ. ಆದರೆ, ನೀರು ಹಂಚಿಕೆಯಲ್ಲಿ ಸಿಂಹ ಪಾಲು ತಮಿಳುನಾಡಿಗೆ ಹಂಚಿಕೆಯಾಗಿದೆ. ಇದು ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಎಂದಿನಂತೆ ಜನ ಸಂಚಾರ:

ಕರ್ನಾಟಕ ಬಂದ್‌ಗೆ ಕನ್ನಡಪರ ಒಕ್ಕೂಟಗಳು ಬಂದ್ ಕರೆ ನೀಡಿದ್ದರೂ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಜಿಲ್ಲೆಯ ಯಾವುದೇ ಅಹಿತಕರ ಘಟನೆ ಘಟನೆ ನಡೆದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳು ತೆಗೆದಿದ್ದವು. ಸರ್ಕಾರಿ ಕಚೇರಿಗಳು, ಎಪಿಎಂಸಿ ವಹಿವಾಟು ಎಂದಿನಂತೆ ನಡೆಯಿತು. ಶಾಲಾ-ಕಾಲೇಜಿಗೆ ಮಕ್ಕಳು ತೆರಳುವುದು ಕಂಡು ಬಂತು.

ರೈಲು ತಡೆಯಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು
ರೈಲು ತಡೆಯಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು
ಯಾದಗಿರಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ ಎಂದಿನಂತೆ ಇತ್ತು
ಯಾದಗಿರಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ ಎಂದಿನಂತೆ ಇತ್ತು
ಕರ್ನಾಟಕ ರಕ್ಷಣಾ ವೇದಿಕೆ ಎಚ್‌.ಶಿವರಾಮೇಗೌಡ ಬಣದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು
ಕರ್ನಾಟಕ ರಕ್ಷಣಾ ವೇದಿಕೆ ಎಚ್‌.ಶಿವರಾಮೇಗೌಡ ಬಣದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು
ಯಾದಗಿರಿ ನಗರದ ಎಪಿಎಂಸಿ ಆವರಣದಲ್ಲಿ ಹೆಸರು ಕಾಳು ವಹಿವಾಟು ನಡೆಯಿತು
ಯಾದಗಿರಿ ನಗರದ ಎಪಿಎಂಸಿ ಆವರಣದಲ್ಲಿ ಹೆಸರು ಕಾಳು ವಹಿವಾಟು ನಡೆಯಿತು
ಪರಿಣಾಮ ಬೀರದ ಕರ್ನಾಟಕ ಬಂದ್‌
ನಗರ ಗ್ರಾಮೀಣ ಪ್ರದೇಶಗಳಲ್ಲಿ ಎಂದಿನಂತೆ ಜನಜೀವನ ಯಾದಗಿರಿ ಸುರಪುರ ಶಹಾಪುರ ಗುರುಮಠಕಲ್‌ ಬಸ್ ಸಂಚಾರ ವಿರಳ ಹಳ್ಳಿಗಳಿಂದ ನಗರಕ್ಕೆ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳ ಆಗಮನ ಎಂದಿನಂತೆ ತೆಗೆದ ಸರ್ಕಾರಿ ಕಚೇರಿಗಳು ಎಪಿಎಂಸಿ ವಹಿವಾಟು ಅಬಾಧಿತ ಟಂಟಂ ಆಟೋಗಳ ಸಂಚಾರವೂ ವಿರಳ ಶಾಲಾ–ಕಾಲೇಜುಗಳಿಗೆ ರಜೆ ಇಲ್ಲ ಅಂಗಡಿ ಮುಂಗಟ್ಟುಗಳಲ್ಲಿ ವಹಿವಾಟು
ಕುರಿ ಸಂತೆಗೆ ತಟ್ಟಿದ ಬಂದ್‌ ಬಿಸಿ
ಜಿಲ್ಲೆಯ ಶಹಾಪುರ ಶುಕ್ರವಾರ ವಾರದ ಸಂತೆ ಹಾಗೂ ರೈತರ ಕುರಿ ಸಂತೆಗೆ ಬಂದ್‌ ಬಿಸಿ ತಟ್ಟಿತು. ಕುರಿ ಸಂತೆಗೆ ದೂರದ ನಾರಾಯಣಪೇಟ ಮೈಹಿಬೂಬ್ ನಗರ ಮಕ್ತಲ್ ರಾಯಚೂರು ದೇವದುರ್ಗ ಸಿಂದಗಿ ಸೇರಿದಂತೆ ವಿವಿಧೆಡೆ ಕುರಿ ವ್ಯಾಪಾರಸ್ಥರ ವಾಹನಗಳ ಓಡಾಟ ಬಹಳ ವಿರಳವಾಗಿತ್ತು. ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ವಾಹನಗಳ ಸಂಚಾರ ಬಹಳ ಕಡಿಮೆ ಇತ್ತು.
‘ರೈತರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಬದ್ಧ’
ಯಾದಗಿರಿ: ಕಾವೇರಿ ಹೋರಾಟ ದಶಕಗಳದ್ದು. ಪ್ರತಿ ಬಾರಿಯೂ ಮಳೆ ಕೊರತೆ ಉಂಟಾದಾಗ ನೆರೆಯ ರಾಜ್ಯದ ಬೇಡಿಕೆ ರಾಜ್ಯ ಮತ್ತು ರಾಜ್ಯದ ರೈತರ ಪಾಲಿಗೆ ಸಂಕಷ್ಟ ಉಂಟು ಮಾಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಕಾವೇರಿ ಕೊಳ್ಳದ ರೈತರ ಹಿತಕ್ಕಾಗಿ ನಿರಂತರ ಹೋರಾಡುತ್ತಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಾಂತಗೌಡ ಮುಡಬೂಳ ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಕಾನೂನು ಹೋರಾಟದ ಮೂಲಕ ಮನವರಿಕೆ ಮಾಡುವ ವಸ್ತುಸ್ಥಿತಿ ಬಿಚ್ಚಿಟ್ಟು ಮನವೊಲಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಯತ್ನ ಹೋರಾಟ ಕಣ್ಮುಂದೆ ಇದೆ. ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖರಾವತ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಪತ್ರ ಬರೆದಿದ್ದಾರೆ. ಸದ್ಯ ಕರ್ನಾಟಕದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮುಂಗಾರು ಕೈ ಕೊಟ್ಟಿರುವುದು ಹಾಗೂ ಕಾವೇರಿ ಕೊಳ್ಳ ಪ್ರದೇಶದಲ್ಲೂ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆ ನೀರು ಹರಿಸಲಾಗದು ಎಂದು ಮನವರಿಕೆ ಮಾಡಲಾಗಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಮಧ್ಯ ಪ್ರವೇಶಿಸಬೇಕು. ರಾಜ್ಯದ ರೈತರ ರಕ್ಷಣೆಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT