ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ವಜ್ಞ ಕವಿಯ ಸಂದೇಶ ಅರಿಯಿರಿ’

ಯಾದಗಿರಿ: ತ್ರಿಪದಿ ಕವಿ ಸರ್ವಜ್ಞ ಜಯಂತಿ ಆಚರಣೆ; ಸಮಾನತೆ ತತ್ವ ಸಾರಿದ ಸಂತ
Last Updated 20 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಯಾದಗಿರಿ: ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆಯನ್ನು ಸಂತ ಕವಿ ಸರ್ವಜ್ಞರು ತ್ರಿಪದಿ ವಚನಗಳ ಮೂಲಕ ತಿದ್ದಿದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ವಚನಗಳ ಸಂದೇಶವನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂತಕವಿ ಸರ್ವಜ್ಞ ಜಯಂತ್ಯುತ್ಸವ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಬದಲಾವಣೆ ಬರಬೇಕಾದರೆ ಮೊದಲು ಪ್ರತಿಯೊಬ್ಬರ ಮನಸ್ಥಿತಿ ಬದಲಾಗಬೇಕು. ಲಿಂಗ, ಜಾತಿ ತಾರತಮ್ಯ ಹೋಗಲಾಡಿಸಿ, ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ ಜನಸಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತ್ರಿಪದಿ ವಚನಗಳನ್ನು ರಚಿಸಿದ್ದಾರೆ. ಅಂತಹ ಪ್ರತಿಯೊಂದು ವಚನಗಳನ್ನು ಮಕ್ಕಳಿಗೆ ಕಲಿಸಬೇಕು. ಜೊತೆಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಬಾಚವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಬಂಗಾರಪ್ಪ ಕುಂಬಾರ ಯರಗೋಳ ಉಪನ್ಯಾಸ ನೀಡಿ, ಸರ್ವಜ್ಞನು ಗರ್ವದಿಂದ ಕಲಿತವನಲ್ಲ, ಸರ್ವರೊಳು ಒಂದೊಂದು ನುಡಿ ಕಲಿತು ಸರ್ವಜ್ಞನಾದನು. 16ನೇ ಶತಮಾನದಲ್ಲಿ ಸರಳ ಭಾಷೆಯ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಮ್ಮ ತ್ರಿಪದಿಯ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿದವರಲ್ಲಿ ಕವಿ ಸರ್ವಜ್ಞ ಒಬ್ಬರಾಗಿದ್ದಾರೆ. ಸರ್ವಜ್ಞ ಎಂಬುವುದು ಸರ್ವವನ್ನು ತಿಳಿದವರು ಎಂದು ಉತ್ತಂಗಿ ಚನ್ನಪ್ಪನವರು ಬರೆದ ಪುಸ್ತಕದಲ್ಲಿ ಉಲ್ಲೇಖವಿದೆ. ತಂದೆ ಬಸವ ಅರಸ, ತಾಯಿ ಕುಂಬಾರ ಮಾಳಮ್ಮ ಅವರ ಮಗನಾಗಿ ಜನಿಸಿದ ಸರ್ವಜ್ಞ ಹಲವು ತ್ರಿಪದಿಗಳ ಮೂಲಕ ಹೆಸರಾಗಿದ್ದಾರೆ ಎಂದು ವಿವರಿಸಿದರು.

ಸರ್ವಜ್ಞ ಎಲ್ಲಾ ಸಮಸ್ಯೆಗಳಿಗೂ ವಚನಗಳ ಮೂಲಕ ಉತ್ತರ ನೀಡಿದ್ದಾರೆ. ಅವರ ವಚನಗಳನ್ನು ಪಾಲನೆ ಮಾಡಿದಲ್ಲಿ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ. ಕುಂಬಾರ ಸಮಾಜದವರು ಮುಗ್ಧರು. ಯಾರಿಗೂ ಕೇಡು ಬಯಸಿದವರಲ್ಲ. ಎಲ್ಲರೊಂದಿಗೆ ಬೆರೆತು ಬದುಕುವ ಸಮುದಾಯವಾಗಿದೆ. ಪ್ರಸ್ತುತ ಸಮಾಜದಲ್ಲಿ ಎಲ್ಲವೂ ಡಿಜಿಟಲೀಕರಣವಾಗಿದೆ. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.

ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಕುಂಬಾರ ದರ್ಶನಾಪುರ, ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಹಣಮಂತಪ್ಪ ಮಿನಾಸಪುರ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಇದ್ದರು.

ಮೆರವಣಿಗೆ:ಕಾರ್ಯಕ್ರಮ ಆರಂಭಕ್ಕೂ ಮುಂಚೆ ನಗರದ ಹೊಸಳ್ಳಿ ಕ್ರಾಸ್‍ನಿಂದ ಜಿಲ್ಲಾಡಳಿತ ಭವನದವರೆಗೆ ಕಲಾತಂಡಗಳೊಂದಿಗೆ ಸಂತಕವಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT