ಯಾದಗಿರಿ: ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಮನೆ ಕುಸಿದು ಮೃತಪಟ್ಟಿದ್ದ ಸಾವಿತ್ರಮ್ಮ ಕುಟುಂಬಕ್ಕೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ಶನಿವಾರ ₹5 ಲಕ್ಷ ಪರಿಹಾರ ಧನದ ಚೆಕ್ನ್ನು ತಮ್ಮ ನಿವಾಸದಲ್ಲಿ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಶಾಸಕ, ಮುಂಗಾರು ಆರಂಭದಲ್ಲಿಯೇ ನಿರಂತರವಾಗಿ ಸುರಿದ ಭಾರಿ ಮಳೆಗೆ ಮನೆ ಕುಸಿದು ಸಾವಿತ್ರಮ್ಮ ಸಾವನ್ನಪ್ಪಿದ್ದು ಅತ್ಯಂತ ನೋವಿನ ಸಂಗತಿ ಎಂದರು. ತೀರಾ ಹಳೆಯದಾದ ಮಣ್ಣಿನ ಮನೆಗಳಲ್ಲಿ ವಾಸಿಸುವ ಜನರು ಮಳೆಗಾಲದ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಹಳೆಯ ಹಾಗೂ ಶಿಥಿಲ ಮನೆಗಳು ತುಂಬಾ ಅಪಾಯಕಾರಿ. ಹೀಗಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಜನರಿಗೆ ಕಿವಿ ಮಾತು ಹೇಳಿದರು.
₹5 ಲಕ್ಷದ ಪರಿಹಾರದ ಮೊತ್ತದ ಚೆಕ್ನ್ನು ಮೃತ ಮಹಿಳೆಯ ಪತಿ ಶಿವಣ್ಣ ಕಂದಕೂರ ಅವರಿಗೆ ನೀಡಲಾಯಿತು. ಕಂದಾಯ ನಿರೀಕ್ಷಕ ಸುಭಾಷ, ಗ್ರಾಮದ ಮುಖಂಡರಾದ ಅಶೋಕರೆಡ್ಡಿ, ಸಾಬಣ್ಣ, ನಿಂಗಪ್ಪ, ಬಾಬು, ನರಸಪ್ಪ, ಭಾಸ್ಕರ್ ಇದ್ದರು.