ಸುರಪುರ: ‘ಕ್ರೈಸ್ತರು ಯೇಸುಸ್ವಾಮಿಯ ಸೇವಕರು. ನಮಗಾಗಿ ಏನೆಲ್ಲ ತ್ಯಾಗ ಮಾಡಿದ ಏಸು ತಂದೆಯನ್ನು ಸ್ಮರಿಸುವುದು ಆತನಿಗಾಗಿ ಏನಾದರು ಒಂದಿಷ್ಟು ಸೇವೆ ಮಾಡುವುದು ನಮೆಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದು ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ರೆ.ಎಸ್. ಮನೋಶಾಂತ ತಿಳಿಸಿದರು.
ನಗರದ ಮೆಥೋಡಿಸ್ಟ್ ಚರ್ಚ್ನಲ್ಲಿ ಶುಭ ಶುಕ್ರವಾರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಕ್ರಿಸ್ತನು ಶಿಲುಬೆ ಮೇಲೆ ನುಡಿದ ಧ್ಯಾನ ಮತ್ತು ಸಪ್ತ ವಾಕ್ಯಗಳ ಕುರಿತು ದೈವ ಸಂದೇಶ ನೀಡಿದರು.
ಸಪ್ತವಾಕ್ಯಗಳಾದ ‘ತಂದೆಯೇ ಅವರಿಗೆ ಕ್ಷಮಿಸು’ ಕುರಿತು ಎಸ್. ಪ್ರಭುಕುಮಾರಿ, ‘ಈ ಹೊತ್ತೆ ನನ್ನ ಸಂಗಡ ಪರದೈಸಿನಲ್ಲಿರುವೆ’ ಕುರಿತು ಪಾಲ ನಾಯಕ, ‘ಅಮ್ಮಾ ಇಗೋ ನಿನ್ನ ಮಗ ನಿನ್ನ ತಾಯಿ’ ಕುರಿತು ಶೋಭಾ ಮನೊಶಾಂತ, ‘ನನ್ನ ದೇವರೆ ಯಾಕೆ ನನ್ನ ಕೈ ಬಿಟ್ಟಿದ್ದಿ’ ಕುರಿತು ಸುನಿಲಾ ಶಾಂತಕುಮಾರ, ‘ನನಗೆ ನೀರಡಿಕೆಯಾಗಿದೆ’ ಕುರಿತು ಆಲೀಸ್ ಜಾನ್ವೆಸ್ಲೀ, ‘ತೀರಿತು’ ಕುರಿತು ಸಾಮವೆಲ್ ಮ್ಯಾಥ್ಯೂ ಉಪನ್ಯಾಸ ನೀಡಿದರು.
ಶುಭ ಶುಕ್ರವಾರ ಅಂಗವಾಗಿ ಸಮಾಜ ಬಾಂಧವರು ಚರ್ಚ್ ಹಾಗೂ ಮನೆಗಳಲ್ಲಿ ಕಳೆದ ಆರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಕೈಗೊಂಡಿದ್ದರು. 40 ದಿನಗಳಿಂದ ಕೈಗೊಂಡಿದ್ದ ಉಪವಾಸ ವ್ರತವನ್ನು ಪ್ರಾರ್ಥನೆ ಮಾಡುವುದರೊಂದಿಗೆ ಸಮಾಪ್ತಗೊಳಿಸಿದರು.
ಜಾನವೆಸ್ಲೀ, ಎಚ್. ಜಯಪ್ಪ, ಸಾಮ್ಯೂವೆಲ್, ವಸಂತಕುಮಾರ, ಅಮಿತಪಾಲ, ಪ್ರೇಮ ಕುಮಾರ, ಸಂಪತಕುಮಾರಿ, ಚಂದ್ರು ಮ್ಯಾಥ್ಯೂ, ಶಕುಂತಲಾ, ಸುಜಾತಾ, ಸೋನಾ, ಸುಮತಿ, ಲಲಿತಾ, ಪವಿತ್ರ, ಶಿಬಾರಾಣಿ ಇದ್ದರು.