ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಲಾಕ್‌ಡೌನ್‌: ಎಂದಿನಂತೆ ಜನ ಸಂಚಾರ

ನಿಯಮಗಳನ್ನು ಗಾಳಿಗೆ ತೂರಿದ ಜನ, ತರಕಾರಿ ಅಂಗಡಿಯಲ್ಲಿ ಸಂಜೆವರೆಗೆ ಖರೀದಿ
Last Updated 19 ಜುಲೈ 2020, 17:07 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಒಂದು ವಾರ ಕಾಲ ಲಾಕ್‌ಡೌನ್ ಘೋಷಿಸಿದ್ದರೂಜನ ಸಂಚಾರ ಭಾನುವಾರ ಎಂದಿನಂತೆ ಸಾಗಿತ್ತು. ಸಂಜೆಯವರೆಗೂ ಅಂಗಡಿ ಮುಂಗಟ್ಟುಗಳಲ್ಲಿ ದಿನಸಿ, ತರಕಾರಿ, ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯಿತು.

ಬ್ಯಾರಿಕೇಡ್ ತೆರವು: ನಗರದ ಪ್ರಮುಖ ವೃತ್ತಗಳಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಮಾತ್ರ ಪೊಲೀಸರು ಕಂಡು ಬಂದರು. ಸಾರ್ವಜನಿಕರು ಮಾಸ್ಕ್‌ ಧರಿಸದೆ, ಅಂತರ ಕಾಪಾಡಿಕೊಳ್ಳದೆ ತರಕಾರಿ ಖರೀದಿಸುವುದು ನಗರದ ಚಿರಂಜೀವಿ ಶಾಲೆ ಪಕ್ಕದಲ್ಲಿರುವ ತರಕಾರಿ ಅಂಗಡಿಗಳ ಮುಂದೆ ಕಾಣಿಸಿತು.

ತರಕಾರಿ, ಹಾಲು ಇನ್ನಿತರ ಅವಶ್ಯಕ ಸಾಮಗ್ರಿ ಖರೀದಿಗೆ ಮಧ್ಯಾಹ್ನದ 1 ಗಂಟೆವರೆಗೆ ಸಮಯ ನಿಗದಿ ಪಡಿಸಿದ್ದರೂ, ತರಕಾರಿ ವ್ಯಾಪಾರ ಮಾತ್ರ ಸಂಜೆವರೆಗೆ ನಡೆಯಿತು. ಜನರು ಮುಗಿಬಿದ್ದು ಖರೀದಿ ಮಾಡುವುದು ಕಂಡು ಬಂದಿತು. ಲಾಕ್‌ಡೌನ್‌ ಇರುತ್ತದೆ ಎಂದು ಕೆಲವರು ಅಗತ್ಯ ಸಾಮಗ್ರಿಗಳನ್ನು ಶನಿವಾರವೇ ಖರೀದಿದ್ದರು. ಆದರೆ, ಭಾನುವಾರವೂ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.

ಇನ್ನುಳಿದಂತೆ ಮಧ್ಯಾಹ್ನದ ನಂತರ ಜನ ಸಂಚಾರ ವಿರಳವಾಗಿತ್ತು. ಸಂಜೆ ವೇಳೆ ಮತ್ತೆ ಜನರು ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಓಡಾಟ ನಡೆಸಿದ್ದರು. ನಗರದ ಅಲ್ಲಲ್ಲಿ ಗುಂಪುಗೂಡಿ ಹರಟೆ ಹೊಡೆಯುವುದು ಕಾಣಿಸಿತು.

ಜಿಲ್ಲೆಯಲ್ಲಿ ಅರ್ಧ ದಿನದ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸಾಮಾನ್ಯ ದಿನದಂತೆ ಭಾನುವಾರವೂ ವ್ಯಾಪಾರ ವಹಿವಾಟು ನಡೆಯಿತು. ಆಟೊ, ಜೀಪ್‌, ಕಾರು, ಬೈಕ್‌ಗಳ ಓಡಾಟವೂ ನಿರಂತರವಾಗಿ ಸಾಗಿತ್ತು.

ಪೊಲೀಸರು ದಂಡ ವಿಧಿಸುವ ಕೆಲಸ ಮತ್ತಷ್ಟು ಮಾಡಿದರೆ ಮಾತ್ರ ಲಾಕ್‌ಡೌನ್‌ಗೆ ಅರ್ಥ ಬರುತ್ತದೆ. ಆದರೆ, ಜಿಲ್ಲೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ನಗರ ನಿವಾಸಿ ರಾಘವೇಂದ್ರ ಕೋಟಗೇರಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT