ಯಾದಗಿರಿ: ಸಮಾಜದಲ್ಲಿ ಜನರ ಏಳಿಗೆಗಾಗಿ ಶಾಂತಿ ಮಂತ್ರ ಸಾರಿದ ಅಹಿಂಸಾ ಪರಮಧರ್ಮ ಎಂದು ತಿಳಿಸಿ ಸನ್ಮಾರ್ಗಕ್ಕೆ ದಾರಿ ತೋರಿ ತಮ್ಮ ಚಿಂತನೆಗಳ ಮೂಲಕ ಜನರಿಗೆ ಅರಿವಿನ ದಾರಿ ತೋರಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅಭಿಪ್ರಾಯಪಟ್ಟರು.
ಲೋಕಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಮಹಾವೀರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.
ತಮ್ಮ ಬೋಧನೆಯ ಮೂಲಕ ಸಮಾಜದ ಅಂಕುಡೊಂಡುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಮನುಷ್ಯ ತನ್ನಲ್ಲಿನ ಅಹಂಕಾರವನ್ನು ತೊರೆದು ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ಬ್ರಹ್ಮಚರ್ಯ ತತ್ವವನ್ನು ಅನುಸರಿಸಿ ನಡೆಯಬೇಕು ಎಂದು ಸಾರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸರೋಜಾ, ಸಹಾಯಕ ಸಾಂಖಿಕ ಇಲಾಖೆ ಅಧಿಕಾರಿ ನಾಗರಾಜ ನಾಗೂರ, ಲೆಕ್ಕ ಪರಿಶೋಧನಾಧಿಕಾರಿ ಸುರೇಶ ಪಾಣಿಬಾತೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಭ್ರಮದ ಮೆರವಣಿಗೆ
ಶಹಾಪುರ: ‘ನೆಮ್ಮದಿಯ ಜೀವನಕ್ಕೆ ಭಗವಾನ ಮಹಾವೀರ ಅವರ ತತ್ವ ಪಾಲನೆ ಅಗತ್ಯವಾಗಿದೆ. ಸಹಕಾರ ಮನೋಭಾವ ಹಾಗೂ ಸಹಬಾಳ್ವೆ ಜೀವನಕ್ಕೆ ಜೈನ ಸಮುದಾಯದ ಕೊಡುಗೆ ಹೆಚ್ಚಿದೆ’ ಎಂದು ಪತ್ರಕರ್ತ ವಿಕ್ರಂ ಜೈನ್ ತಿಳಿಸಿದರು.
ನಗರದ ಜೈನ್ ಮಂದಿರದ ಕಲ್ಯಾಣ ಮಂಟಪದಲ್ಲಿ ಭಾನುವಾರ ಭಗವಾನ ಮಹಾವೀರ ಜಯಂತ್ಯುತ್ಸವ ಅಂಗವಾಗಿ ಜೈನ್ ಸಮುದಾಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈನ್ ಸಮುದಾಯದ ಮುಖಂಡರಾದ ಮಾಂಗಿಲಾಲ್ ಜೈನ್, ಇಂದರಕರಣ ಜೈನ್, ಲಲಿತಕುಮಾರ ಜೈನ್, ರಾಜು ಜೈನ್, ಆನಂದ ಜೈನ್, ಜಿತೇಂದ್ರ ಜೈನ್ ಮುಂತಾದವರು ಉಪಸ್ಥಿತರಿದ್ದರು.
‘ಮಹಾವೀರರ ಬೋಧನೆಯಿಂದ ಜೀವನ ಸುಧಾರಣೆ’
ಸುರಪುರ: ಸ್ಥಾನಕವಾಸಿ ಜೈನ ಶ್ರಾವಕ ಸಂಘದ ವತಿಯಿಂದ ಇಲ್ಲಿನ ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಭಗವಾನ ಮಹಾವೀರ ಜನ್ಮ ಕಲ್ಯಾಣ ಮಹೋತ್ಸವ ಜರುಗಿತು.
ಮಹಾವೀರರ ಬಗ್ಗೆ ಪ್ರವಚನ ನೀಡಿದ ಜೈನ ಪಾರಸಮುನಿ, ‘ಮಹಾವೀರರು ಅಂಹಿಸೆ, ಸತ್ಯ, ಕಳ್ಳತನ ಮಾಡದಿರುವುದು, ಪರಿಶುದ್ಧತೆ, ಅಪರಿಗ್ರಹ ಈ ಪ್ರಮುಖ ಐದು ಅಂಶಗಳನ್ನು ಬೋಧಿಸಿದರು. ಈ ಬೋಧನೆಗಳು ವ್ಯಕ್ತಿಯ ಜೀವನಮಟ್ಟ ಸುಧಾರಿಸಲು ನೆರವಾಗುತ್ತವೆ’ ಎಂದು ತಿಳಿಸಿದರು.
ಜೈನ ಪದಮುನಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇಲ್ಲಿನ ಖ್ಯಾತ ಉದ್ಯಮಿ ಕಿಶೋರಚಂದ್ ಜೈನ್ ಅವರಿಗೆ ಅಖಿಲ ಭಾರತ ವರ್ದಮಾನ್ ಜೈನ್ ಸಮೂದಾಯದ ವತಿಯಿಂದ ‘ಶಾಸನ ರತ್ನ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಸುನೀಲ ಲೋಡಾ ಕಲಬುರಗಿ, ನರೇಂದ್ರ ಮುಥಾ ರಾಯಚೂರು, ಗೌತಮ ದೋಖಾ ಯಾದಗಿರಿ, ಸುಭಾಶ ಸೋಲಂಕಿ, ದೀಪಚಂದ ರುನವಾಲ ವಿಜಯಪುರ, ಅಶೋಕಕುಮಾರ ತಲೇಂದಾ ಕೊಪ್ಪಳ, ಜ್ಞಾನಚಂದ್ ಜೈನ್ ಛಾಜೇಡ, ಸರ್ದಾರಮಲ್ ಜೈನ್, ಬಿಕಮಚಂದ್ ಸುರಾನಾ, ಮೋಹನಲಾಲ ಜೈನ್, ಮಹಾವೀರ ಆಂಚಾಲಿಯಾ ಸೇರಿದಂತೆ ಜೈನ್ ಸಮುದಾಯದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.