ಸೈದಾಪುರ: ಮೆಣಸಿನಕಾಯಿ ಬೆಳೆಯನ್ನು ಪಹಣಿಯಲ್ಲಿ ಭತ್ತ ಎಂದು ನಮೂದು ಮಾಡಿದ ಕೃಷಿ ಅಧಿಕಾರಿಗಳ ಯಡವಟ್ಟಿನಿಂದ ಬೆಳೆವಿಮೆ ಬಾರದೆ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಮೀಪದ ಭೀಮನಳ್ಳಿ ಗ್ರಾಮದ ರೈತ ಸಿದ್ಧಲಿಂಗರೆಡ್ಡಿ ಆರೋಪಿಸಿದರು.
‘ ಸುಮಾರು ₹ 2 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡಿ ಒಟ್ಟು 5 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದೇನೆ. ಆದರೆ ಮೆಣಸಿನಬೆಳೆಗೆ ಮುಟ್ಟುರೋಗ ಬಂದು ಸಂಪೂರ್ಣ ಒಣಗಿಹೋಗುತ್ತಿದೆ. ಇದರಿಂದ ಬೆಳೆವಿಮೆ ಪಡೆಯಲು ವಿಮಾ ಕಂಪನಿಯನ್ನು ಸಂಪರ್ಕಸಿದಾಗ ನೀವು ವಿಮೆ ಮಾಡಿಸಿದ್ದು ಮೆಣಸಿನಕಾಯಿಗೆ; ಪಹಣಿಯಲ್ಲಿ ಭತ್ತ ಎಂದು ನಮೂದಿಸಲಾಗಿದೆ. ಹೀಗಾಗಿ ವಿಮೆ ಸಿಗುವುದಿಲ್ಲ ಎನ್ನುತ್ತಿದ್ದಾರೆ. ನಮ್ಮ ಕಷ್ಟಕಾಲದಲ್ಲಿ ಅನೂಕೂಲವಾಗಲಿ ಎಂದು ಸಾಲ ಮಾಡಿ ಬಿತ್ತನೆ ಜೊತೆಗೆ ಬೆಳೆವಿಮೆಯನ್ನು ಮಾಡಿಸಿದ್ದೇನೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದೀಗ ನಮಗೆ ದಿಕ್ಕು ತೋಚದಂತಾಗಿದೆ’ ಎಂದು ಸಿದ್ಧಲಿಂಗರೆಡ್ಡಿ ಅವಲತ್ತುಕೊಂಡರು.
‘ಕೃಷಿ ಅಧಿಕಾರಿಗಳು ಬೆಳೆವಿನಾಶವಾದ ಹೊಲಗಳಿಗೆ ಹೋಗಿ ಪರಿಶೀಲನೆ ಮಾಡದೆ ಕಾರ್ಯಾಲಯದಲ್ಲಿ ಕುಳಿತು ಬೆಳೆ ಸಮೀಕ್ಷೆ ಮಾಡಿ ಪಹಣಿಯಲ್ಲಿ ಮಣಸಿನಕಾಯಿ ಬದಲಾಗಿ ಭತ್ತ ಎಂದು ನಮೂದು ಮಾಡಿದ್ದಾರೆ. ಎರಡೂವರೆ ಎಕರೆ ಬೆಳೆಗೆ ಹವಾಮಾನ ಆಧಾರಿತ ಬೆಳೆವಿಮಾ ಯೋಜನೆಯಲ್ಲಿ ಸುಮಾರು ₹ 3590.47 ಪ್ರಿಮಿಯಂನ್ನು ಜುಲೈ ತಿಂಗಳಲ್ಲಿ ಕಂಪನಿಗೆ ತುಂಬಿದ್ದೇನೆ. ನನಗೆ ಬರಬೇಕಾದ ₹ 71,809 ವಿಮಾ ಮೊತ್ತ ಬಾರದೆ ನಷ್ಟ ಅನುಭವಿಸುವಂತಾಗಿದೆ’ ಎಂದರು.
ಚಿತ್ರಶೀರ್ಷಿಕೆ:8ಎಸ್ಡಿಪಿಆರ್1: ಸೈದಾಪುರ ಸಮೀಪದ ಭೀಮನಳ್ಳಿ ಗ್ರಾಮದ ರೈತನ ಹೊಲದಲ್ಲಿ ಬಿತ್ತನೆ ಮಾಡಿದ ಮೆಣಸಿನ ಕಾಯಿ ಬೆಳೆ ಮುಟ್ಟುರೋಗಕ್ಕೆ ತುತ್ತಾಗಿರುವುದು.
ಗ್ರಾಮದಲ್ಲಿನ ಬೆಳೆ ಸಮೀಕ್ಷೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಗ್ರಾಮ ಸಹಾಯಕರಿಂದ ಸಮಸ್ಯೆಯಾಗಿರಬಹುದು. ಇದರ ಬಗ್ಗೆ ಮಾಹಿತಿ ಪಡೆದು ತಿಳಿಸುತ್ತೇನೆ.