ಯಾದಗಿರಿ: ಅನವಶ್ಯಕ ವಿಚಾರಗಳು ಮನುಷ್ಯನ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತವೆ. ದೇಹದ ಸದೃಢತೆಗೆ ಮಾನಸಿಕ ಆರೋಗ್ಯವು ಮುಖ್ಯ. ಹಾಗಾಗಿ, ಸಾತ್ವಿಕ ಆಹಾರ ಸೇವಿಸುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲವಜ್ಜಲ್ಕರೆ ನೀಡಿದರು.
ನಗರದ ಬಾಲಾಜಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಸಂಘ (ಮಾನಸಿಕ ವಿಭಾಗ) ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಹದ ಅಂಗಗಳಲ್ಲಿ ಕಣ್ಣು ಕೂಡ ಅತಿ ಮುಖ್ಯ. ಬದುಕಲು ಮಾತ್ರ ಆಹಾರ ಸೇವಿಸಬೇಕು. ಆಹಾರ ಸೇವನೆಗಾಗಿಯೇಬದುಕಬಾರದು. ಮನುಷ್ಯ ಜೀವನದಲ್ಲಿ ಛಲದಿಂದ ಬದುಕಲು ಕಲಿಯಬೇಕು. ಆರೋಗ್ಯಕ್ಕೆ ಮಹತ್ವ ನೀಡಿ, ಮತ್ತೊಬ್ಬರಿಗೂ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡಿ ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ಮಾನಸಿಕ ಕಾಯಿಲೆ ಮನಸ್ಸಿನ ನೆಮ್ಮದಿಗೆ ತೊಂದರೆ ಮಾಡುತ್ತದೆ. ಅಸ್ವಸ್ಥ ಹಾಗೂ ಬುದ್ಧಿಮಾಂಧ್ಯರಿಗೆ ಗೌರವ ನೀಡಬೇಕು. ಮಾನಸಿಕ ಅಸ್ವಸ್ಥರು ಕಂಡುಬಂದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿ. ಮೆಂಟಲ್ ಹೆಲ್ತ್ ಕಾಯಿದೆಯ ಅಡಿಯಲ್ಲಿ ಅವರಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ತಿಳಿಸಿದರು.
ನೇತ್ರತಜ್ಞ ಡಾ.ಪ್ರದೀಪರಡ್ಡಿ ಕಣ್ಣಿನ ಮಹತ್ವ ಕುರಿತು ಉಪನ್ಯಾಸ ನೀಡಿ, ಜಗತ್ತಿನಲ್ಲಿ 25 ಕೋಟಿ, ಭಾರತದಲ್ಲಿ 5 ಕೋಟಿ ಜನರು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. 60 ವರ್ಷ ವಯಸ್ಸಾದವರ ಕಣ್ಣಿಗೆ ಪೊರೆ ಬರುವುದು. ಇದನ್ನು ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲಾಗುತ್ತದೆ. ಹೃದ್ರೋಗಿಗಳಲ್ಲಿ ದೃಷ್ಟಿ ಸಮಸ್ಯೆ ಇರುತ್ತದೆ. ಡಯಾಬಿಟೀಸ್ ಅನ್ನು ನಿಯಂತ್ರಣ ಮಾಡಿದರೆ ಕಣ್ಣಿನ ದೃಷ್ಟಿ ಸಮಸ್ಯೆ ನಿಯಂತ್ರಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಮನೋವೈದ್ಯ ಡಾ.ಉಮೇಶ ಮಾತನಾಡಿ, ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಯಾರೂ ಮಾನಸಿಕ ಕಾಯಿಲೆ ಇರುವ ಕುರಿತು ಹೇಳಿಕೊಳ್ಳುವುದಿಲ್ಲ. ಮಾನಸಿಕ ಆರೋಗ್ಯ ಹೆಚ್ಚಿಸಿಕೊಳ್ಳಿ, ಆತ್ಮಹತ್ಯೆ ನಿಯಂತ್ರಿಸಿ ಎನ್ನುವುದು ಪ್ರಸಕ್ತ ವರ್ಷದ ಘೋಷವಾಕ್ಯವಾಗಿದೆ. ಮನುಷ್ಯ ಜೀವನದಲ್ಲಿ ಬರುವ ಒತ್ತಡಗಳನ್ನು ನಿಯಂತ್ರಣ ಮಾಡುವುದು ತಿಳಿಯಬೇಕು. ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನ ಮಾಡಬೇಕು ಎಂದು ಹೇಳಿದರು.
ಬಾಲಾಜಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಭೀಮರಾಯ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್ ಮಾಲಿಮಾಟೀಲ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ವಿನಯಕುಮಾರ ಕುಲಕರ್ಣಿ ಹಾಗೂ ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ನಾಗಯ್ಯ ಗುತ್ತೆದಾರ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ನಿರೂಪಿಸಿದರು. ಹಿರಿಯ ಆರೋಗ್ಯ ಸಹಾಯಕರಾದ ಮಹಿಪಾಲರಡ್ಡಿ ಸ್ವಾಗತಿಸಿ, ವಂದಿಸಿದರು.
ಜಾಗೃತಿ ಜಾಥಾ:ಕಾರ್ಯಕ್ರಮಕ್ಕೂ ಮೊದಲು ನಗರದ ಹಳೆ ಪ್ರವಾಸಿ ಮಂದಿರದಿಂದ ಬಾಲಾಜಿ ಪದವಿ ಮಹಾವಿದ್ಯಾಲಯದವರೆಗೆ ನಡೆದ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.