ಸುರಪುರ: ‘ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಶರಣರ ಪ್ರಕರಣವನ್ನು ಪಕ್ಕದ ರಾಜ್ಯಕ್ಕೆ ವರ್ಗಾಯಿಸಬೇಕು’ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ ಕಕ್ಕೇರಾ ಮಾತನಾಡಿ, ‘ಹೆಸರಾಂತ ಮಠಾಧಿಕಾರಿಯಾಗಿದ್ದ ಮುರುಘಾ ಶರಣರ ಮೇಲಿನ ಆರೋಪ ಮಾನವ ಜನಾಂಗ ತಲೆ ತಗ್ಗಿಸುವಂಥದ್ದು. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಸಮರ್ಪಕ ನ್ಯಾಯ ದೊರಕಿಸಬೇಕಾದ ಅಗತ್ಯ ಇದೆ. ಸಂತ್ರಸ್ತ ಬಾಲಕಿಯರಿಗೆ ಸೂಕ್ತ ಪರಿಹಾರ ನೀಡಿ ಅವರ ಕುಟುಂಬಗಳಿಗೆ ಭದ್ರತೆ ಒದಗಿಸಬೇಕು. ಪ್ರಕರಣದಿಂದ ವಸತಿ ಶಾಲೆಯ ಇತರ ವಿದ್ಯಾರ್ಥಿನಿಯರು ಗಾಬರಿಯಾಗಿರುವುದರಿಂದ ತಕ್ಷಣ ವಸತಿ ನಿಲಯವನ್ನು ಮುಟ್ಟುಗೋಲು ಹಾಕಕೊಳ್ಳಬೇಕು. ವಿದ್ಯಾಭ್ಯಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
ಹುಣಸಗಿ: ‘ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಎದುರುಸುತ್ತಿರುವ ಚಿತ್ರದುರ್ಗದ ಮುರುಘಾ ಶರಣರ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು’ ಎಂದು ಪಟ್ಟಣದ ಡಿಎಸ್ಎಸ್ ಪದಾಧಿಕಾರಿಗಳುತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ಮಾಡಿದರು.
ತಾಲ್ಲೂಕು ಸಂಚಾಲಕ ವಿರೇಶ ಗುಳಬಾಳ ಮಾತನಾಡಿ, ‘ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಯಾವುದೇ ಕಾರಣಕ್ಕೂ ಒತ್ತಾಯಕ್ಕೆ ಮಣಿಯಬಾರದು’ ಎಂದು ಆಗ್ರಹಿಸಿದರು.
ಚಂದ್ರಶೇಖರ ಬಲಶೇಟ್ಟಿಹಾಳ ಮಾತನಾಡಿದರು. ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು.