ಶಹಾಪುರ: ಜನನ, ಮರಣ, ಜಾತಿ ಆದಾಯ ಹಾಗೂ ಪಹಣಿ ಸೇರಿದಂತೆ ಸಾರ್ವಜನಿಕವಾಗಿ 43 ವಿವಿಧ ಸೌಲಭ್ಯಗಳನ್ನು ಒಂದೇ ಸೂರಿನಡೆ ಒದಗಿಸಲಾಗಿದೆ. ಕಡಿಮೆ ಶುಲ್ಕದಲ್ಲಿ ಶೀಘ್ರ ಸೇವೆ ಸಿಗಲಿದೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರದ ತಹಶೀಲ್ದಾರ್ ಕಚೇರಿ ಪ್ರಾಂಗಣದಲ್ಲಿ ₹ 18.84 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿದ ನಾಡ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಜನರಿಗೆ ಪ್ರತ್ಯೇಕವಾದ ನಾಡ ಕಚೇರಿಯಿಲ್ಲದ ಕಾರಣ ಸಾಕಷ್ಟು ತೊಂದರೆ ಅನುಭವಿಸುವಂತೆ ಆಗಿತ್ತು. ಸಾರ್ವಜನಿಕರು ತೊಂದರೆ ಎದುರಿಸುವಂತೆ ಆಗಿತ್ತು. ಕಚೇರಿ ಸ್ಥಾಪನೆಯಿಂದ ಇಲ್ಲಿನ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಕಂದಾಯ ಸಿಬ್ಬಂದಿಯು ಸಹ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ತ್ವರಿತವಾಗಿ ಸೇವೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಭೂಮಿ, ಮೋಜಣಿ ಹಾಗೂ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಸೇವೆ ಸೌಲಭ್ಯ ಇಲ್ಲಿ ಸಿಗಲಿದೆ. ಆಧಾರ ಕಾರ್ಡ್ ತಿದ್ದುಪಡಿ ಹೀಗೆ ಹಲವಾರು ಜನಪರ ಸೇವೆಗಳು ಸೌಲಭ್ಯ ಸಿಗಲಿದೆ. ಸಾರ್ವಜನಿಕರು ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್, ತಹಶೀಲ್ದಾರ ಉಮಾಕಾಂತ ಹಳ್ಳೆ, ಗ್ರೇಡ್ -2 ತಹಶೀಲ್ದಾರ ಸೇತು ಮಾಧವ ಕುಲಕರ್ಣಿ, ಸಂಗಮೇಶ ನಾಯಕ, ಗಿರೀಶ, ತಾಲ್ಲೂಕು ನೌಕರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೆದ, ತಾಪಂ ಇ.ಒ ಸೋಮಶೇಖರ ಬಿರಾದಾರ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಹೂಗಾರ ಇದ್ದರು.