ಸುರಪುರ: ‘ಪುಸ್ತಕಗಳನ್ನುಅಭ್ಯಾಸ ಮಾಡಿ ಜ್ಞಾನಾರ್ಜನೆ ಬೆಳೆಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ’ ಎಂದು ಕನ್ನಡ ಉಪನ್ಯಾಸಕ ಡಾ.ಹಳ್ಳೆಪ್ಪ ಅಭಿಪ್ರಾಯಿಸಿದರು.
ನಗರದ ಜನನಿ ಮಹಿಳಾ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಜಾಣ-ಜಾಣೆಯರ ಬಳಗ ಮಾಲಿಕೆ-2 ರ ಅಡಿ ಶುಕ್ರವಾರ ಆಯೋಜಿಸಿದ್ದ ಪುಸ್ತಕ ಪ್ರಕಾಶನ ಕರಡಚ್ಚು ತಿದ್ದುವುದರ ಬಗ್ಗೆ ಸ್ಥಳೀಯ ಪ್ರಕಾಶಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪುಸ್ತಕಗಳ ಅಧ್ಯಯನದಿಂದ ನೈತಿಕ ಬಲ, ವ್ಯಕ್ತಿತ್ವದ ಬೆಳವಣಿಗೆ ಜತೆಗೆ ಜಾಗತಿಕ ಚಿಂತನೆ ಬೆಳೆಯಲು ಸಾಧ್ಯವಾಗುತ್ತದೆ.ಹೀಗಾಗಿವಿದ್ಯಾರ್ಥಿಗಳು ಪುಸ್ತಕಗಳ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಪ್ರಾಂಶುಪಾಲೆ ಬಸವರಾಜೇಶ್ವರಿ ದೇವತ್ಕಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ವಿದ್ಯಾರ್ಥಿಗಳು ಮುಂದಿನ ಸ್ನಾತಕೋತ್ತರ ಅಧ್ಯಯನ ಸಂದರ್ಭದಲ್ಲಿ ಸಾಹಿತ್ಯಿಕ ಕೃತಿಗಳು ಬಹಳ ಸಹಕಾರಿಯಾಗುತ್ತವೆ’ ಎಂದು ಹೇಳಿದರು.
ಉಪನ್ಯಾಸಕರಾದ ಡಾ. ಆದಿಶೇಷ ನೀಲಗಾರ, ಅಂಬ್ರೇಶ ಚಲ್ಲಾರ, ತಿರುಪತಿ ಕೆಂಭಾವಿ, ಸುವರ್ಣ ಅಂಟೋಳಿ, ಶಿವಕುಮಾರ ಕ್ವಾಟಿ ಇದ್ದರು.ಉಪನ್ಯಾಸಕ ಬೀರಲಿಂಗ ನಿರೂಪಿಸಿದರು. ವಿದ್ಯಾರ್ಥಿನಿ ಕರಿಷ್ಮಾ ವಂದಿಸಿದರು.