ಸುರಪುರ: ತಾಲ್ಲೂಕಿನ ಬಾದ್ಯಾಪುರ ಗ್ರಾಮದ ಗೊಬ್ಬರ ವ್ಯಾಪಾರಿಯೊಬ್ಬರು ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ರೈತರೊಂದಿಗೆ ಬುಧವಾರ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶನಾಯಕ ಭೈರಿಮರಡಿ, ‘ಮಾಚಗುಂಡಾಳ ಗ್ರಾಮದ ರೈತ ಶಿವಪ್ಪ ನಾಗನಟಗಿ 10 ಗೊಬ್ಬರ ಚೀಲಗಳನ್ನು ಖರೀದಿಸಿದ್ದರು. ಗೊಬ್ಬರ ಹೊಲಕ್ಕೆ ಹಾಕಲು ಹೋದಾಗ ಮರಳು ಮಿಶ್ರಣ ಮಾಡಿದ್ದು ಕಂಡು ಬಂದಿದೆ’ ಎಂದರು.
‘ನಕಲಿ ಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟವಾಗುತ್ತಲೇ ಇದೆ. ಅಧಿಕಾರಿಗಳು ತಕ್ಷಣ ಇಂತಹ ವರ್ತಕರ ಮೇಲೆ ಕಠಿಣ ಕ್ರಮ ಜರುಗಿಸಿ ಅವರ ಪರವಾನಗಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.
ಪ್ರಕರಣ ದಾಖಲು: ಪ್ರತಿಭಟನೆಗೆ ಸ್ಪಂದಿಸಿದ ಕೃಷಿ ಅಧಿಕಾರಿಗಳು ನಕಲಿ ರಸಗೊಬ್ಬರ ಮಾರಾಟ ಮಾಡಿದ ಆರೋಪ ಹೊತ್ತಿರುವ ಬಾದ್ಯಾಪುರದ ಮಂಜುನಾಥ ಕೃಷಿ ಕೇಂದ್ರದ ಮೇಲೆ ಬುಧವಾರ ಮೇಲೆ ದಾಳಿ ನಡೆಸಿದರು.
‘ಅನಧಿಕೃತ ಗೋದಾಮು ಮತ್ತು ಸಂಶಯಾತ್ಮಕ ರಸಗೊಬ್ಬರ ಎಂದು ವರದಿ ಸಲ್ಲಿಸಲಾಗಿದೆ. ಗೋದಾಮು ಜಪ್ತಿ ಮಾಡಲಾಗಿದೆ. ರಸಗೊಬ್ಬರ ನಮೂನೆಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಗುರುನಾಥ ತಿಳಿಸಿದರು.