ಗುರುಮಠಕಲ್: ಪೆಟ್ರೋಲ್, ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿ ಬಿಎಸ್ಪಿ ತಾಲ್ಲೂಕು ಘಟಕದ ಕಾರ್ಯಕರ್ತರು ಗುರುವಾರ ತಹಶೀಲ್ದಾರ್ ಮಹಮ್ಮದ್ ಶಕೀಲ್ ಅವರಿಗೆ ಮನವಿ ಪತ್ರ ನೀಡಿದರು.
ಮನವಿ ಪತ್ರದಲ್ಲಿ ʼಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವೈಜ್ಞಾನಿಕವಾಗಿ ತೈಲ ಉತ್ಪನ್ನಗಳ ಮೇಲೆ ಶೇ 300 ರಷ್ಟು ತೆರಿಗೆ ವಿಧಿಸಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಮೇಲೆ ಈ ಪ್ರಮಾಣದ ತೆರಿಗೆಯನ್ನು ವಿಧಿಸಿರುವ ಇನ್ನೊಂದು ದೇಶವನ್ನು ನಾವು ಕಾಣಲು ಸಾಧ್ಯವೇ ಇಲ್ಲ. ಆದ್ದರಿಂದ ಅವೈಜ್ಞಾನಿಕ ತೆರಿಗೆಯನ್ನು ಕೂಡಲೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಅಡುಗೆ ಎಣ್ಣೆಯ ದರ ₹ 200ಕ್ಕೆ ತಲುಪಿದೆ. ಜನರು ಲಾಕ್ಡೌನ್ನಿಂದಾಗಿ ಈಗಾಗಲೇ ತುಂಬಾ ನಷ್ಟಲ್ಲಿದ್ದಾರೆ. ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದು, ಜನರು ವೈದ್ಯಕೀಯ ಸೌಲಭ್ಯಗಳಿಗೆ ಪರದಾಡುವಂತಾಗಿದೆ. ಜನರನ್ನು ಶೋಷಿಸುತ್ತಿರುವ ಈ ಅವೈಜ್ಞಾನಿಕ ತೆರಿಗೆಯ ಕ್ರಮವನ್ನು ಕೈಬಿಡಬೇಕುʼ ಎಂದು ಕೋರಲಾಗಿದೆ.
ಬಿಎಸ್ಪಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಭೀಮಶಪ್ಪ ಗಾಡದನ, ಜಿಲ್ಲಾ ಕಾರ್ಯದರ್ಶಿ ಅಶೋಕ ಗಿರಿಗಿರಿ, ಬ್ಲಾಕ್ ಘಟಕದ ಅಧ್ಯಕ್ಷ ಮಹದೇವಪ್ಪ ಚಪೆಟ್ಲಾ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಂಟು, ಭೀಮು ಗಿರಿಗಿರಿ, ಜಾನ್ ಪೆರಿಯಾರ್, ಅಬ್ಬಸ್ ಖಾನ್ ಇದ್ದರು.